ಒಮ್ಮೆ ಮಾತ್ರ ನಿಯಮ ಸಡಿಲಿಸಲು ಸಿ.ಎಂ ಸೂಚನೆ | ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ | ಗ್ರಾಮೀಣ, ನಗರ ಪ್ರದೇಶಕ್ಕೆ ಅನ್ವಯ
ಬೆಂಗಳೂರು: ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣವನ್ನು ಪರಿಗಣಿಸದೆ, ಈಗಾಗಲೇ ನಿರ್ಮಾಣವಾಗಿರುವ ಎಲ್ಲ ಕಟ್ಟಡಗಳಿಗೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆಯು ನಿರ್ಧರಿಸಿದೆ.
ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಟಿಪ್ಪಣಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
‘ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ನಕ್ಷೆಗೆ ಅನುಮೋದನೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿರುವ, ಸ್ವಾಧೀನಾನುಭವ ಪತ್ರ (ಒಸಿ) ಇಲ್ಲದೆ ಇದ್ದರೂ, ವಿದ್ಯುತ್ ಸಂಪರ್ಕ
ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವ ಸುಮಾರು ಒಂದು ಲಕ್ಷ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಇಂಧನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಎ ಖಾತಾ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯ ಎಂಬ ಷರತ್ತುಗಳನ್ನು
ವಿಧಿಸದೆ, ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ಸಲ್ಲಿಕೆ ಕಡ್ಡಾಯ ಎಂಬ ನಿಯಮವನ್ನು ಒಮ್ಮೆ ಮಾತ್ರ ಸಡಿಲಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಕಟ್ಟಡದ ನಕ್ಷೆ ಉಲ್ಲಂಘನೆ ಆಗಿದೆ ಎಂಬುದನ್ನು ಆಧರಿಸಿ ದಂಡವನ್ನು ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಶೇ 10ರಷ್ಟು ಉಲ್ಲಂಘನೆ ಆಗಿದ್ದರೆ ವಿನಾಯಿತಿ ನೀಡಬಹುದು. ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ಶೇ 15ರಷ್ಟು ದಂಡ ವಿಧಿಸಬಹುದು. ಅಂತಿಮವಾಗಿ ದಂಡ ಎಷ್ಟು ಎಂಬ ಬಗ್ಗೆ ತೀರ್ಮಾನಿಸುವ ಅಧಿಕಾರವನ್ನು ಸಂಪುಟ ಸಭೆಯ ವಿವೇಚನೆಗೆ ಬಿಡಲಾಗಿದೆ.
‘ಇನ್ನು ಮುಂದೆ ನಕ್ಷೆ ಅನುಮೋದನೆ ಇಲ್ಲದೆ ಕಟ್ಟಡಗಳನ್ನು ನಿರ್ಮಿಸುವುದು, ನಕ್ಷೆ ಉಲ್ಲಂಘನೆ ಮಾಡು
ವುದನ್ನು ತಡೆಯಲು ಮಸೂದೆ ರೂಪಿಸಲಾಗುವುದು. ಬರುವ ದಿನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ನಿಯಮ ಸಡಿಲಿಕೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕೋರಿ ಸುಮಾರು ಒಂದು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲೇ ಸುಮಾರು 50 ಸಾವಿರ ಅರ್ಜಿಗಳಿವೆ. ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ಇಲ್ಲದೆ ಇದ್ದರೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಕಾರಣ ಹೊಸದಾಗಿ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ. ಕೋರ್ಟ್ ತೀರ್ಪನ್ನು ಈ ವರ್ಷದ ಏಪ್ರಿಲ್ 4ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ.
ದಿಕ್ಕು ತೋಚದಾಗಿದೆ: ‘ಸಾಲ ಮಾಡಿ ಮನೆ ಕಟ್ಟಲಾಗಿದೆ. ಪ್ರತಿ ತಿಂಗಳು ಸಾಲದ ಕಂತು ಕಟ್ಟಬೇಕು. ಇತ್ತ ಬೆಸ್ಕಾಂನವರು ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಮನೆ ಕಟ್ಟಿ ಆದ ಮೇಲೆ ವಿದ್ಯುತ್ ನೀಡುವುದಿಲ್ಲ ಎಂದರೆ ನಾವು ಏನು ಮಾಡಬೇಕು? ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪತ್ರ ಬೇಕು ಎನ್ನುತ್ತಿದ್ದಾರೆ. ನಮ್ಮದ್ದು ಬಿ ಖಾತಾ ನಿವೇಶನ. ಇದಕ್ಕೆ ನಕ್ಷೆ ಮಂಜೂರಾತಿ ಸಿಗುವುದಿಲ್ಲ. ಈಗ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ’ ಎಂದು ಕೆ.ಆರ್.ಪುರದ ನಿವಾಸಿ ನಾಗರಾಜ್ ಅಳಲು ತೋಡಿಕೊಂಡರು.
ಒ.ಸಿ ವಿನಾಯಿತಿ ಉಪಯೋಗಕ್ಕೆ ಬಾರದ ಆದೇಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 1,200 ಚದರ ಅಡಿವರೆಗಿನ ನಿವೇಶನ ದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಿ ಈ ತಿಂಗಳ ಮೊದಲ ವಾರ ಆದೇಶ ಹೊರಡಿಸಲಾಗಿದೆ.
ಇದು ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯವಾಗಲಿದೆ. ಅಲ್ಲದೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣ ಮಾಡಿರುವ ಕಟ್ಟಡಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.
ಇದರಿಂದಾಗಿ ನಗರಾಭಿವೃದ್ಧಿ ಇಲಾಖೆಯ ಈ ಆದೇಶದಿಂದ ಯಾರಿಗೂ ಉಪಯೋಗವಾಗುವು
ದಿಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರು ಹಾಗೂ ಅದರ ಸುತ್ತಮುತ್ತ ನಿರ್ಮಾಣವಾಗಿರುವ ಹೆಚ್ಚಿನ ಮನೆಗಳು ಬಿ ಖಾತಾ ನಿವೇಶನದಲ್ಲಿಯೇ ಇವೆ. ಬಿ ಖಾತಾದಲ್ಲಿ ಕಟ್ಟಿರುವ ಕಟ್ಟಗಳಿಗೆ ನಕ್ಷೆ ಮಂಜೂರಾತಿ ಸಿಕ್ಕಿರುವುದಿಲ್ಲ. ಎ ಖಾತಾ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿ, ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂದು
ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.