ADVERTISEMENT

1 ಸಾವಿರ ಸ್ವಯಂಸೇವಕರಿಂದ ಪ್ರವಾಹ ಪೀಡಿತ ಹೊಳೆಆಲೂರು ಸ್ವಚ್ಛ

ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಸ್ವಚ್ಛತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 16:32 IST
Last Updated 30 ಆಗಸ್ಟ್ 2019, 16:32 IST
ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಶುಕ್ರವಾರ ಹೊಳೆಆಲೂರು ಪಟ್ಟಣವನ್ನು ಸ್ವಚ್ಚಗೊಳಿಸಲಾಯಿತು.
ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಶುಕ್ರವಾರ ಹೊಳೆಆಲೂರು ಪಟ್ಟಣವನ್ನು ಸ್ವಚ್ಚಗೊಳಿಸಲಾಯಿತು.   

ಹೊಳೆಆಲೂರು: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೇವದಂಡಾ ಪಟ್ಟಣದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಪ್ರವಾಹ ಪೀಡಿತ ಹೊಳೆಆಲೂರು ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಮಹಾರಾಷ್ಟ್ರದ ಕೊಲ್ಲಾಪುರ ಸೇರಿದಂತೆ ರಾಜ್ಯದ ಧಾರವಾಡ,ಇಳಕಲ್, ಹುಬ್ಬಳ್ಳಿ, ಕಲಬುರಗಿ, ವಿಜಯಪುರ, ಬೆಳಗಾವಿ, ಬೀದರ್, ಕೊಪ್ಪಳ ಜಿಲ್ಲೆಗಳಿಂದ ಬಂದಿದ್ದ 1 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಹೊಳೆ ಆಲೂರು ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಶಾಲಾ ಕಾಲೇಜುಗಳ ಆವರಣ, ದೇವಸ್ಥಾನದ ಆವರಣ, ಸರ್ಕಾರಿ ಕಚೇರಿಗಳ ಆವರಣ, ಬಡಾವಣೆಗಳನ್ನು ಸ್ವಚ್ಚಗೊಳಿಸಿತು.

ಚರಂಡಿಲ್ಲಿ ತುಂಬಿದ್ದ ಹೂಳನ್ನು ತೆಗೆದು, ಮಲಿನದ ನೀರು ಸಮರ್ಪಕವಾಗಿ ಹರಿದು ಹೋಗಲು ಅನುವು ಮಾಡಿಕೊಡಲಾಯಿತು. ಪ್ರವಾಹದಿಂದಾಗಿ ಪಟ್ಟಣದಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗಿತ್ತು. ಎಲ್ಲಿ ನೋಡಿದರೂ ಕಸದ ರಾಶಿಯೇ ಕಾಣುತ್ತಿತ್ತು. ಸ್ವಯಂಸೇವಕರು ಎಲ್ಲವನ್ನು ಸ್ವಚ್ಚಗೊಳಿಸಿದರು. ಬಳಿಕ ಡಿಡಿಟಿ ಪುಡಿ ಸಿಂಪಡಣೆ ಮಾಡಿದರು.

ADVERTISEMENT

ನಾನಾಸಾಹೇಬ ಪ್ರತಿಷ್ಠಾನದ ಈ ಕಾರ್ಯಕ್ಕೆ ಹೊಳೆಆಲೂರು ಪಟ್ಟಣದ ಜನರು ಅಭಿನಂದನೆ ಸಲ್ಲಿಸಿದರು. ಯಾವುದೇ ಫಲಾಪೇಕ್ಷೆಯನ್ನು ಬಯಸದೇ ಸ್ವಯಂ ಪ್ರೇರಿತರಾಗಿ ಗ್ರಾಮವನ್ನು ಸ್ವಚ್ಚಗೊಳಿಸಿರುವ ಪ್ರತಿಷ್ಠಾನದ ಕಾರ್ಯವು ಶ್ಲಾಘನೀಯ ಎಂದು ಗ್ರಾಮಸ್ಥ ಫಕರುಸಾಬ ಚಿಕ್ಕಮಣ್ಣೂರು ಹೇಳಿದರು.

ಸ್ವಚ್ಛತಾ ಅಭಿಯಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಹುಬ್ಬಳ್ಳಿ ಘಟಕದ ಪ್ರತಿನಿಧಿ ವಿಜಯ ಲಕ್ಕುಂಡಿ, ‘ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಆಂದೋಲನದ ರೂಪದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದೇವೆ. ಜನರು ಜಾಗೃತಗೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.