ADVERTISEMENT

ಸಿಎಂ ಕಾರ್ಯದರ್ಶಿ ಸೇರಿ 17 ಐಎಎಸ್‌ಗಳ ವರ್ಗ: BBMPಗೆ ತುಷಾರ್, KPSCಗೆ ರಾಜೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2022, 12:39 IST
Last Updated 5 ಮೇ 2022, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ 17 ಹಿರಿಯ ಹಾಗೂ ಕಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಗೌರವ್ ಗುಪ್ತಾ ಅವರನ್ನು ಮೌಲಭೂತ ಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ ಗಿರಿನಾಥ್ ಅವರನ್ನು ಕಳುಹಿಸಲಾಗಿದೆ.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ADVERTISEMENT

ಇನ್ನು ಸಿಎಂ ಬೊಮ್ಮಾಯಿ ಅವರ ಕಾರ್ಯದರ್ಶಿಯಾಗಿದ್ದ ಪೊನ್ನುರಾಜ ವಿ ಅವರನ್ನು ಸಿಬ್ಬಂಧಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಅಲ್ಲದೇ ಕರ್ನಾಟಕ ವಿದ್ಯುತ್ ನಿಗಮದ ಎಂಡಿಯಾಗಿ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಮನೋಜ್ ಜೈನ್ ಅವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಖುಷ್ಬೂ ಚೌಧರಿ ಅವರನ್ನು ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಬಾಗಲಕೋಟೆ ಜಿಲ್ಲಾಧಿಕಾರಿಯಾಗಿದ್ದ ಕ್ಯಾಪ್ಟನ್ ರಾಜೇಂದ್ರ ಕೆ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಈ ಸ್ಥಾನದಲ್ಲಿ ಸತ್ಯವತಿ ಅವರಿದ್ದರು.

ಬೆಳಗಾವಿ ಡಿಸಿ ಎಂಜಿ ಹಿರೇಮಠ ಅವರನ್ನು ಕೆಆರ್‌ಐಡಿಎಲ್‌ನ ಎಂಡಿಯಾಗಿ ವರ್ಗಾಯಿಸಲಾಗಿದೆ. ಧಾರವಾಡ ಡಿಸಿಯಾಗಿದ್ದ ನಿತೇಶ್ ಪಾಟೀಲ್ ಅವರನ್ನು ಬೆಳಗಾವಿ ಡಿಸಿಯಾಗಿ ಕಳುಹಿಸಲಾಗಿದೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಎಂಡಿ ಗುರುದತ್ ಹೆಗಡೆ ಅವರನ್ನು ಧಾರವಾಡ ಡಿಸಿಯಾಗಿ ವರ್ಗಾಯಿಸಲಾಗಿದೆ.

ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ನವೀನ್ ಭಟ್ ಅವರನ್ನು ಕೆಎಸ್‌ಆರ್‌ಟಿಸಿಯ ಸಿಬ್ಬಂಧಿ ವಿಭಾಗದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದ್ದು, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಭೂಬಾಲನ್ ಟಿ ಅವರನ್ನು ಬಾಗಲಕೋಟೆ ಕಳುಹಿಸಲಾಗಿದೆ.

ಕಲಬುರಗಿ ಜಿಪಂ ಸಿಇಒ ದಿಲೀಸ್ ಶಶಿ ಅವರನ್ನು ಆಡಳಿತ ಸುಧಾರಣೆ ಇಲಾಖೆಯ ಇಡಿಸಿಎಸ್‌ ವಿಭಾಗದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಭರತ್ ಎಸ್ ಅವರಿಗೆ ಹುಬ್ಬಳ್ಳಿಯ NWKRTC ಯ ಎಂಡಿಯಾಗಿ ಜಾಗ ತೋರಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಶಿಲ್ಪಾ ಅವರನ್ನು ಕರ್ನಾಟಕ ನಗರ ಮೂಲಭೂತ ಸೌಕರ್ಯ ಹಾಗೂ ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ದೆಹಲಿ ಕರ್ನಾಟಕ ಭವನದ ಉಪ ಸ್ಥಾನೀಯ ಆಯುಕ್ತರಾಗಿದ್ದ ಪ್ರಸನ್ನ ಎಚ್‌ ಅವರನ್ನು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗಾಯಿಸಲಾಗಿದ್ದು, ಕೊಳ್ಳೆಗಾಲ ಎಸಿಯಾಗಿದ್ದ ದಿಲೀಪ್ ಬಾಡೋಳೆ ಅವರನ್ನು ಕಲಬುರಗಿ ಜಿಪಂ ಸಿಇಒ ಆಗಿ ವರ್ಗಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.