
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಎಕ್ಸ್ನಲ್ಲಿ ಮಾಡಿರುವ ಮಾರ್ಮಿಕ ಪೋಸ್ಟ್ ಗಮನ ಸೆಳೆದಿದೆ.
ಡಿಸೆಂಬರ್ 13ರಂದು ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿ ಬಳಿಕ ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಂಗಳವಾರ ಸಂಜೆ 5.15ರ ಸುಮಾರಿಗೆ ತಮಿಳುನಾಡಿನ ಗೂಡಲೂರಿನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿನ ವಿಮಾನ ನಿಲ್ದಾಣಕ್ಕೆ ವಾಪಸಾದ ರಾಹುಲ್ ಅವರನ್ನು ಸಿದ್ದರಾಮಯ್ಯ, ಶಿವಕುಮಾರ್ ಭೇಟಿಯಾಗಿದ್ದರು.
ಏಕಕಾಲಕ್ಕೆ ಇಬ್ಬರನ್ನು ಎದುರುಗೊಂಡ ರಾಹುಲ್ ಅವರು, ಸಿದ್ದರಾಮಯ್ಯನವರ ಜತೆ ಮಾತನಾಡುತ್ತಲೇ, ಶಿವಕುಮಾರ್ ಅವರಿಂದ ಕೊಂಚ ದೂರ ಕರೆದೊಯ್ದರು. ಅವರೊಂದಿಗೆ ಕೆಲಕ್ಷಣ ಮಾತನಾಡಿದರು. ಅದಾದ ಬಳಿಕ, ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋದ ರಾಹುಲ್, ಅವರೊಂದಿಗೂ ಕೆಲ ಕ್ಷಣ ಮಾತನಾಡಿದರು. ಸೌಜನ್ಯದ ಭೇಟಿಯ ವೇಳೆ, ‘ದೆಹಲಿಗೆ ಬನ್ನಿ, ಚರ್ಚಿಸೋಣ’ ಎಂದು ರಾಹುಲ್ ಅವರು ಇಬ್ಬರು ನಾಯಕರಿಗೆ ಹೇಳಿದ್ದಾಗಿ ಗೊತ್ತಾಗಿದೆ.
ಪ್ರತ್ಯೇಕವಾಗಿ ಮಾತನಾಡಿದ ವಿಡಿಯೊ ಹಾಗೂ ಫೋಟೊಗಳು ಶಿವಕುಮಾರ್ ಅವರ ಚಟುವಟಿಕೆಗಳನ್ನು ಪ್ರಸಾರ ಮಾಡುವ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಹರಿದಾಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.