ವಿಜಯಪುರ ಲೋಕಸಭಾ ಕ್ಷೇತ್ರದ ಪಾರಮ್ಯಕ್ಕಾಗಿ ಪೈಪೋಟಿ ಬಿರುಸುಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಈಗಾಗಲೇ ಸಮಾವೇಶಗಳನ್ನು ನಡೆಸಿವೆ. ಜಾತಿ ಸಮಾವೇಶವೂ ನಡೆದಿದೆ. 1999ರಿಂದ ಬಿಜೆಪಿಯ ಭದ್ರಕೋಟೆ. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಎರಡು ಬಾರಿ ಸತತ ಗೆಲುವು ದಾಖಲಿಸಿದ್ದು, ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಜಿಗಜಿಣಗಿ ಸ್ಪರ್ಧೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಪಸ್ವರ ತೆಗೆದಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಏರ್ಪಟ್ಟರೆ ಕ್ಷೇತ್ರ ಕಾಂಗ್ರೆಸ್ ಪಾಲಾಗುವುದು ಖಚಿತ. ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಕೋರಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಧಿಪತ್ಯಕ್ಕೆ ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಮಧ್ಯೆ ಈ ಬಾರಿಯೂ ಪೈಪೋಟಿ ಆರಂಭವಾಗಿದೆ. ಮಧು ಬಂಗಾರಪ್ಪ ಅವರನ್ನೇ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಎರಡು ಬಾರಿ ಸಂಸದರಾಗಿರುವ ರಾಘವೇಂದ್ರ ಹ್ಯಾಟ್ರಿಕ್ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮಧು ಅವರು ರಾಘವೇಂದ್ರ ಅವರನ್ನು ಈ ಬಾರಿ ಮಣಿಸುವ ಮೂಲಕ ಕುಟುಂಬದ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಹಮ್ಮಸ್ಸಿನಲ್ಲಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಎದುರಾಳಿ ಪೈಲ್ವಾನ್ನನ್ನು ‘ಚಿತ್’ ಕೆಡುವವರೆಗೆ ನಡೆಯುವ ಜಂಗಿ ನಿಕಾಲಿ ಕುಸ್ತಿಗೆ ಚಿಕ್ಕೋಡಿ ಪ್ರಸಿದ್ಧಿ. ಅಂತಹದ್ದೇ ಪಟ್ಟುಗಳು ಇಲ್ಲಿನ ರಾಜಕೀಯದಲ್ಲೂ ಇವೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿಯ ರಮೇಶ ಕತ್ತಿ ಪರಸ್ಪರ ತೊಡೆ ತಟ್ಟಿದ್ದರು. ಇಬ್ಬರೂ ಒಂದೊಂದು ಬಾರಿ ಗೆದ್ದಿದ್ದಾರೆ. ಈಗ ನಡೆಯಲಿರುವ ಚುನಾವಣೆಯಲ್ಲಿ ಮೂರನೇ ಬಾರಿಯೂ ಇದೇ ಜೋಡಿ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತ.
ಇಲ್ಲಿ ಜೆಡಿಎಸ್ ಹೆಸರಿಗಷ್ಟೇ ಇದೆ. ಹಣಾಹಣಿ ಏನಿದ್ದರೂ ಕಾಂಗ್ರೆಸ್– ಬಿಜೆಪಿ ನಡುವೆಯೇ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.