ಚಿತ್ರದುರ್ಗ: ‘ಬಿಜೆಪಿ ಹೈಕಮಾಂಡ್ ಶಕ್ತಿಯುತವಾಗಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಇಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನ ಸಾಮಾನ್ಯರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸರಳ ಸಜ್ಜನಿಕೆಯಿಂದ ಎಲ್ಲರ ಜತೆಗೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವ ಯಾವುದೇ ಸನ್ನಿವೇಶ ಎದುರಾಗಿಲ್ಲ’ ಎಂದು ಸ್ಷಷ್ಟಪಡಿಸಿದರು.
‘ಕರ್ನಾಟದಲ್ಲಿ ಪ್ರಜ್ಞಾವಂತ ಸಮುದಾಯವಿದೆ. ಉತ್ತರಪ್ರದೇಶದ ರೀತಿಯೇ ರಾಜ್ಯದಲ್ಲೂ ಜಾತಿ ರಾಜಕಾರಣ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜಾತಿವಾದ ಪ್ರತಿಪಾದಿಸಿದರು. ಆದರೆ ಹಿಜಾಬ್ ಪ್ರಕರಣ ಬಂದಾಗ ಒಬ್ಬರೂ ಬಾಯಿ ಬಿಡಲಿಲ್ಲ’ ಎಂದು ತಿರುಗೇಟು ನೀಡಿದರು.
‘ಅವರ ಕಾಲು ಇವರು, ಇವರ ಕಾಲು ಅವರು ಎಳೆದುಕೊಂಡು ಗುಂಪುಗಾರಿಕೆ ಮಾಡಿದ್ದರಿಂದ ಪಂಜಾಬ್ನಲ್ಲಿ ಕಾಂಗ್ರೆಸ್ ನಿರ್ನಾಮ ಆಯಿತು. ಮೊನ್ನೆ ರಾಹುಲ್ ಗಾಂಧಿ ರಾಜ್ಯದ ಗುಂಪುಗಾರಿಕೆ ಕುರಿತು ಮೂರು ಗಂಟೆ ದೆಹಲಿಯಲ್ಲಿ ಪಕ್ಷದ ನಾಯಕರಿಗೆ ಪಾಠ ಮಾಡಿದ್ದಾರೆ. ಅದೇ ಚಿತ್ರಣ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ನೋಡುತ್ತದೆ. ಆದರೆ ಬಿಜೆಪಿಯಲ್ಲಿ ಒಳ ಜಗಳ, ಗುಂಪುಗಾರಿಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.