ADVERTISEMENT

ಜುಲೈ, ಆಗಸ್ಟ್‌ನಲ್ಲಿ ಕೊರೊನಾ ಉಲ್ಬಣಿಸುವ ಸಾಧ್ಯತೆ: ಅಶೋಕ

ಇನ್ನೂ ಆರು ತಿಂಗಳು ಇದೇ ಸ್ಥಿತಿ, ಮಾನಸಿಕವಾಗಿ ಸಿದ್ಧರಾಗಿ: ವೈದ್ಯಕೀಯ ಸಿಬ್ಬಂದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 10:37 IST
Last Updated 29 ಜೂನ್ 2020, 10:37 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ತಜ್ಞರು ನೀಡಿರುವ ವರದಿಯ ಪ್ರಕಾರ ಇನ್ನೂ ಆರು ತಿಂಗಳು ಕೋವಿಡ್‌–19 ಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದೆ. ಗಂಭೀರ ಪರಿಸ್ಥಿತಿ ಎದುರಿಸಲು ವೈದ್ಯಕೀಯ ಸಿಬ್ಬಂದಿ ಮಾನಸಿಕವಾಗಿ ತಯಾರಾಗಬೇಕು ಎಂದು ಬೆಂಗಳೂರು ಕೋವಿಡ್‌ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜುಲೈ 6ರ ನಂತರ ಬೆಂಗಳೂರು ‌ಮತ್ತು ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದರು. ಇವೆಲ್ಲದರ ಕಾರಣ ರಾಜ್ಯದ ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದೂ ಹೇಳಿದರು.

ಸೋಂಕು ಹರಡುವುದನ್ನು ತಡೆಯಲು ಮತ್ತು ಸೋಂಕಿತರಿಗೆ ಗುಣಮಟ್ಟದ ಊಟ, ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಜನತೆ ಇನ್ನು ಮುಂದು ಕೊರೊನಾ ಜತೆ ಬದುಕುವುದು ಅನಿವಾರ್ಯ ಆಗಲಿದೆ ಎಂದು ಅಶೋಕ ತಿಳಿಸಿದರು.

ADVERTISEMENT

ಏನೇ ಆದರೂ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಮಾನಸಿಕವಾಗಿ ಎಲ್ಲ ಕೊರೊನಾ ವಾರಿಯರ್ಸ್‌ಗಳು ಸೇವೆಗೆ ಸನ್ನದ್ಧರಾಬೇಕು.

ಸೇವೆಯಲ್ಲಿ ನಿರತವಾಗಿರುವ ವೈದ್ಯರು ಸೇವೆಗೆ ಹೆಚ್ಚಿನ ಗಮನಹರಿಸಬೇಕು. ಪಿಆರ್‌ ಕೆಲಸ ಮಾಡುವಂತಿಲ್ಲ. ಅದಕ್ಕೆಂದೇ ಆಸ್ಪತ್ರೆಗಳಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಯ ಪರೀಕ್ಷಾ ಕೇಂದ್ರಗಳಲ್ಲಿ ಪಾಸಿಟಿವ್‌ ಅಂತ ಹೇಳ್ತಾ ಇದ್ದಾರೆ. ರೋಗಿಯ ಪರೀಕ್ಷಾ ವರದಿ ಸಿಗುವ ಮೊದಲೇ ಪಾಸಿಟಿವ್‌ ಎಂದು ಹೇಳುವುದು ಸರಿಯಲ್ಲ. ಐಸಿಎಂಆರ್‌, ಬಿಬಿಎಂಪಿ ಪೋರ್ಟಲ್‌ಗೆ ಮಾಹಿತಿ ಅಪ್‌ಡೇಟ್‌ ಮಾಡಬೇಕು ಮತ್ತು ರೋಗ ಲಕ್ಷಣಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 85 ಸಹಾಯಕ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತೇವೆ. 20 ಹೊಸ ತಹಶೀಲ್ದಾರ್‌ಗಳನ್ನು ಕೋವಿಡ್‌ ಸೆಂಟರ್‌ಗಳಿಗೆ ಉಸ್ತುವಾರಿಗೆ ನೇಮಕ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.