ಮೈಸೂರು: ವಿಧಾನಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು 12,205 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು.
ಬಿಜೆಪಿಯ ಮೈ.ವಿ.ರವಿಶಂಕರ್ 33,878 ಮತಗಳನ್ನು ಗಳಿಸಿದರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ 17 ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿದ ಬಳಿಕವೂ, ಅತಿ ಹೆಚ್ಚು ಮತ ಗಳಿಸಿದ್ದ ಮಧು ಅವರಿಗೆ ನಿಗದಿತ ಕೋಟಾ ತಲುಪಲು (46083) 808 ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಸ್ಪರ್ಧಿ ಮೈ.ವಿ. ರವಿಶಂಕರ್ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಿದರು. ಕೋಟ ತಲುಪುತ್ತಿದ್ದಂತೆಯೇ ಎಣಿಕೆ ಕಾರ್ಯ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಬುಧವಾರ ಬೆಳಿಗ್ಗೆ 8ಕ್ಕೆ ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆಯು ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಮುಕ್ತಾಯವಾಯಿತು. ಫಲಿತಾಂಶಕ್ಕಾಗಿ ನಿರಂತರ 29 ಗಂಟೆಗಳವರೆಗೆ ಪ್ರಕ್ರಿಯೆ ನಡೆಯಿತು. ಈ ಕ್ಷೇತ್ರದಲ್ಲಿ ಇಷ್ಟು ಸುದೀರ್ಘ ಸಮಯದವರೆಗೆ ಮತ ಎಣಿಕೆ ಕಾರ್ಯ ನಡೆದದ್ದು ಇದೇ ಮೊದಲು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.