ADVERTISEMENT

ರಾಜ್ಯದಲ್ಲಿನ್ನು ನೈಟ್‌ ಕರ್ಫ್ಯೂ ಕೂಡ ಇಲ್ಲ, ಕುದುರೆ ರೇಸ್‌ಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 10:00 IST
Last Updated 5 ನವೆಂಬರ್ 2021, 10:00 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಬೆಂಗಳೂರು: ಕೋವಿಡ್‌ 19 ಸೋಂಕು ತಡೆ ಹಿನ್ನೆಲೆ ರಾಜ್ಯದಲ್ಲಿ ಹೇರಲಾಗಿದ್ದ ನೈಟ್‌ ಕರ್ಪ್ಯೂ ಆದೇಶವನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿಷೇಧ ಜಾರಿಯಲ್ಲಿತ್ತು. ಅಕ್ಟೋಬರ್‌ 25ಕ್ಕೆ ನೈಟ್‌ ಕರ್ಫ್ಯೂಗೆ ಸಂಬಂಧಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನೈಟ್‌ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆದು ಹಾಕಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್‌ ನೂತನ ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್‌ 25ಕ್ಕೆ ನೈಟ್‌ ಕರ್ಫ್ಯೂವನ್ನು ಮುಂದುವರಿಸಿರುವ ಆದೇಶವನ್ನು ಪ್ರಕಟಿಸಲಾಗಿತ್ತು. ಇದು ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟುಮಾಡಿತ್ತು. ರಾತ್ರಿ ಕರ್ಫ್ಯೂ ಅಗತ್ಯತೆ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿದ್ದವು. ಇದೀಗ 10 ದಿನಗಳ ಬಳಿಕ ರಾತ್ರಿ ಕರ್ಫ್ಯೂವನ್ನು ತೆಗೆದು ಹಾಕಲಾಗಿದೆ.

ADVERTISEMENT

ಕುದುರೆ ರೇಸ್‌ಗೆ ಅನುಮತಿ
ಈ ನಡುವೆ ಕುದುರೆ ರೇಸ್‌ಗೆ ಅನುಮತಿ ನೀಡಲಾಗಿದೆ. ಕುದುರೆ ರೇಸ್‌ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗುರುವಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 261 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಐವರು ಕೋವಿಡ್‌ ಕಾರಣದಿಂದ ಮೃತರಾಗಿದ್ದಾರೆ. ಒಟ್ಟಾರೆ ಇದುವರೆಗೆ 29,89,275 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 38,095 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.