
ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಾಗೂ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆಯೇ ಅಥವಾ ನಾನು ಹೇಳಿದ್ದೀನಾ?, ಪಕ್ಷದ ಸಂಘಟನೆ ಬಗ್ಗೆ ಮಾತ್ರ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಹೈಕಮಾಂಡ್ ಏನು ಹೇಳುತ್ತಾರೊ ಹಾಗೇ ಕೇಳಿಕೊಂಡು ಹೋಗುತ್ತೇನೆ. ಐದು ವರ್ಷ, ಹತ್ತು ವರ್ಷ, ಹದಿನೈದು ವರ್ಷ... ಎಷ್ಟು ವರ್ಷ ಸಿಎಂ ಆಗಿರಬೇಕು ಎಂದು ಹೈಕಮಾಂಡ್ ಹೇಳುತ್ತಾರೆ. ನಮಗೆ ಹೇಳಿದ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ’ ಎಂದು ಅವರು ಹೇಳಿದ್ದಾರೆ.
‘ನಾನು ಪಕ್ಷದ ಚೌಕಟ್ಟು ಬಿಟ್ಟು ಏನನ್ನು ಮಾಡುವುದಿಲ್ಲ. ಯಾವ ನವೆಂಬರ್ ಕ್ರಾಂತಿಯೂ ಇಲ್ಲ. ಡಿಸೆಂಬರ್ ಇಲ್ಲ, ಜನವರಿ... ಫೆಬ್ರುವರಿ ಏನು ಇಲ್ಲ. ಬದಲಾಗಿ 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಆಗಲಿದೆ’ ಎಂದು ಅವರು ನುಡಿದಿದ್ದಾರೆ.
2025, 2026ಕ್ಕೂ ಯಾವ ಕ್ರಾಂತಿಯೂ ಆಗುವುದಿಲ್ಲ. ಆಕಾಂಕ್ಷಿಗಳಿಗೆ ಏನನ್ನು ಹೇಳಬೇಕು ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.