ADVERTISEMENT

'ಅಲಿಂಗ' ಸಮಾವೇಶ ಆಯೋಜನೆ: ಇಬ್ರಾಹಿಂ

ಸಿ.ಎಂ. ಇಬ್ರಾಹಿಂ - ಎಸ್‌.ಆರ್‌. ಪಾಟೀಲ ಭೇಟಿ, ಚರ್ಚೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 16:28 IST
Last Updated 30 ಜನವರಿ 2022, 16:28 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹುಬ್ಬಳ್ಳಿ: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹಾಗೂ ಕಾಂಗ್ರೆಸ್‌ ಮುಖಂಡ ಎಸ್‌.ಆರ್‌. ಪಾಟೀಲ ಭಾನುವಾರನಗರದಲ್ಲಿ ಭೇಟಿಯಾಗಿ ಚರ್ಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಆರ್‌. ಪಾಟೀಲ, ಇಬ್ರಾಹಿಂ ಅವರು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಿಗದಿದ್ದಕ್ಕೆ ಬಹಳ ನೋವು ಮಾಡಿಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಿದ್ದೇನೆ ಎಂದರು.

'ಪಕ್ಷದಲ್ಲಿ ಮುಂದುವರೆಯಬೇಕು ಮನವಿ ಮಾಡಿಕೊಂಡಿದ್ದೇನೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಅಭಿಪ್ರಾಯ ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ' ಎಂದು ಹೇಳಿದರು.

'ವಿಧಾನ ಪರಿಷತ್‌ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಮಾಧ್ಯಮದ ಮುಂದೆ ಎಲ್ಲ ವಿಷಯ ಹೇಳುವುದಿಲ್ಲ. ಪ್ರಸಂಗ ಬಂದಾಗ ಹೇಳುತ್ತೇನೆ. ಕಾಂಗ್ರೆಸ್‌ನಲ್ಲಿದ್ದೇನೆ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತೇನೆ. ಇಬ್ರಾಹಿಂ ದೊಡ್ಡ ನಾಯಕರು. ಅವರು ಪಕ್ಷ ಬಿಟ್ಟರೆ ತೊಂದರೆಯಾಗುತ್ತದೆ' ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಕೂಡಲಸಂಗಮದಿಂದ 'ಅಲಿಂಗ' (ಅಲ್ಪಸಂಖ್ಯಾತರು, ಲಿಂಗಾಯತ) ಸಮಾವೇಶ ಮಾಡಲಾಗುವುದು. ಅದು ಪಕ್ಷಾತೀತವಾಗಿ ನಡೆಯಲಿದ್ದು, ಸ್ವಾಮೀಜಿಗಳು, ಸೂಫಿ ಸಂತರು ಭಾಗವಹಿಸಲಿದ್ದಾರೆ ಎಂದರು.

'ನನಗೆ ಅವಕಾಶ ಸಿಗದಿದ್ದಕ್ಕೆ ಪಾಟೀಲರು ವಿಷಾದ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಅಸಮಾನತೆ ನಿವಾರಣೆಗಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ' ಎಂದು ಹೇಳಿದರು.

'ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ನಿರೀಕ್ಷೆಗಿಂತ ಎರಡರಷ್ಟು ಬೆಂಬಲ ಸಿಗುತ್ತಿದೆ. ಜೆಡಿಎಸ್‌, ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್‌ ಪಕ್ಷಗಳ ಆಯ್ಕೆಯಿದೆ. ವಿಳಂಬ ಮಾಡುವುದಿಲ್ಲ. ಶೀಘ್ರವೇ ನಿರ್ಧಾರವನ್ನು ಪ್ರಕಟಿಸುತ್ತೇನೆ' ಎಂದರು.

'ಸಿದ್ದರಾಮಯ್ಯ ಅವರಿಂದ ಫೋನ್‌ ಬಂದಿಲ್ಲ. ನಿರೀಕ್ಷೆಯೂ ಮಾಡುವುದಿಲ್ಲ. ಆರ್‌ಎಸ್‌ಎಸ್‌ನವರು ಫೋನ್‌ ಮಾಡಿದರೂ ಸ್ಪಂದಿಸುತ್ತೇನೆ. ಇನ್ನು ಸಿದ್ದರಾಮಯ್ಯ ಅವರು ಫೋನ್‌ ಮಾಡಿದರೆ ಮಾತನಾಡುವುದಿಲ್ಲವೇ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.