ADVERTISEMENT

ಲೂಟಿ ಹೊಡೆದಿದ್ದರಿಂದ ಜನ ತಿರಸ್ಕರಿಸಿದ್ದು: ಜೋಶಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 9:44 IST
Last Updated 24 ಫೆಬ್ರುವರಿ 2024, 9:44 IST
<div class="paragraphs"><p>ಹಾಸನದ&nbsp;ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ</p></div>

ಹಾಸನದ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

   

ಹಾಸನ: ‘ಬಿಜೆಪಿಯವರು ಲೂಟಿ ಹೊಡೆಯುವುದರಲ್ಲಿಯೇ ನಿರತರಾಗಿದ್ದರಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರನ್ನು ಅವರನ್ನು ತಿರಸ್ಕರಿಸಿ, ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂಗಳ ದೇವಸ್ಥಾನದ ಹಣ ಸರ್ಕಾರದ ಲೂಟಿ ಮಾಡುತ್ತಿದೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

‘ಹಿಂದೂ ದೇವಸ್ಥಾನಗಳಲ್ಲಿ ಯಾವ ದೇಗುಲಗಳಲ್ಲಿ ಹೆಚ್ಚು ಆದಾಯವಿದೆಯೋ, ಅಲ್ಲಿನ ಹಣವನ್ನು ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಕೆ ಮಾಡಲಾಗುತ್ತದೆ. ಬೇರೆ ಧರ್ಮದ ದೇವಾಲಯಗಳಿಗೆ ಉಪಯೋಗಿಸುವುದಿಲ್ಲ. ಅದಕ್ಕಾಗಿಯೇ ಮಸೂದೆ ತಂದರೆ, ವಿಧಾನ ಪರಿಷತ್‌ನಲ್ಲಿ ತಿರಸ್ಕರಿಸಿದ್ದಾರೆ’ ಎಂದು ಹೇಳಿದರು.

‘ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಆದರೆ, ಬಿಜೆಪಿಯವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಇಂತಹ ದರಿದ್ರ ಸರ್ಕಾರ ನೋಡಿಲ್ಲ. ಸರ್ಕಾರಿ ನೌಕರರಿಗೆ ಸಂಬಳ‌ ಕೊಡಲೂ ಹಣ ಇಲ್ಲ ರಾಜ್ಯ ಲೂಟಿ ಮಾಡಿ ಚುನಾವಣೆ ಎದುರಿಸಲು ಹೊರಟಿದ್ದಾರೆ’ ಎಂಬ ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈ ಸರ್ಕಾರದಲ್ಲಿ ಸಂಬಳ ಕೊಟ್ಟಿಲ್ಲ ಎಂದು ಯಾರಾದರೂ ಹೇಳಿದ್ದಾರಾ’ ಮರು ಪ್ರಶ್ನೆ ಮಾಡಿದರು.

‘ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡುವ ಅನಂತ್‌ಕುಮಾರ್‌ ಹೆಗಡೆ, ಲೋಕಸಭಾ ಸದಸ್ಯರಾಗಲು ಲಾಯಕ್ಕಾ? ಅವರ ಮಾತಿಗೆ ಯಾವುದೇ ಬೆಲೆ ಇಲ್ಲ’ ಎಂದರು.

‘ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದಾರೆ. ಕಾಮಾಲೆ‌ ರೋಗದವರಿಗೆ ಕಾಣೋದೆಲ್ಲಾ ಹಳದಿನೇ. ಅವರು ಮಾತನಾಡುವುದು ಸಬ್ ಕಾ ಸಾಥ್, ಸಬ್ ಕಾ ವಿಕಾಸ. ಆದರೆ ಮುಸ್ಲಿಂರನ್ನು ವಿರೋಧ ಮಾಡುತ್ತಾರೆ. ನಮ್ಮನ್ನೇಕೆ ಸಿದ್ರಾಮುಲ್ಲಾ ಎಂದು ಕರೆಯುತ್ತಾರೆ ಎಂದರೆ ಅಲ್ಪಸಂಖ್ಯಾತರನ್ನು ಕಂಡರೆ ಅವರಿಗೆ ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಕೇಂದ್ರ ಸರ್ಕಾರ ತೆರಿಗೆ ಹಣದ ವಿಚಾರದಲ್ಲೂ ಅನ್ಯಾಯ ಮಾಡಿದೆ. ₹100 ತೆರಿಗೆಗೆ ₹13 ಮಾತ್ರ ನಮಗೆ ಕೊಡುತ್ತಾರೆ‌‌. ನಮಗೆ ಬರುವ ಪಾಲಿನಲ್ಲಿ ಅನ್ಯಾಯವಾದರೆ ಸುಮ್ಮನಿರಬೇಕೇ? ಕೇಂದ್ರ ಸರ್ಕಾರದ ದ್ರೋಹವನ್ನು ಸಮರ್ಥನೆ ಮಾಡಿಕೊಂಡು, ಪಕ್ಷ ರಾಜಕಾರಣಕ್ಕಾಗಿ ಬಿಜೆಪಿಯವರು ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ‌’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.