ADVERTISEMENT

ಬಿಜೆಪಿ ಸರ್ಕಾರದ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 10:44 IST
Last Updated 2 ಏಪ್ರಿಲ್ 2021, 10:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕಾಂಗ್ರೆಸ್‌– ಬಿಜೆಪಿ ನಡುವೆ ರಾಜಕೀಯ ಕೆಸರೆರೆಚಾಟ ಶುಕ್ರವಾರವೂ ಮುಂದುವರಿದಿದೆ.

ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿ ಸರ್ಕಾರದ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ. ಇಲ್ಲಿ ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂತ್ರಿ ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡರೆ, ಆರೋಗ್ಯಾಧಿಕಾರಿಗೆ ಅಮಾನತು ಶಿಕ್ಷೆ. ಅಮಾನತಾಗಬೇಕಿದ್ದಿದ್ದು ಸಚಿವ ಬಿ.ಸಿ.ಪಾಟೀಲ ಅವರು ಅಲ್ಲವೇ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದೆ.

‘ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್‌ ಅವರೇ ಬೇರೊಬ್ಬರ ಕೀಲಿಗೊಂಬೆ ಅಧ್ಯಕ್ಷರಾಗಿ ಪಕ್ಷದ ಆಂತರಿಕ ಕಲಹವನ್ನು ನಿಭಾಯಿಸಲು ಅಗದ್ದಕ್ಕೆ ತಮಗೆ ಬೆನ್ನೆಲುಬಿಲ್ಲ ಎನ್ನುವುದು ಸತ್ಯ. ನಿಮ್ಮ ಮನೆಯಲ್ಲಿ ಬೆಂಕಿ ಬಿದ್ದಿದ್ದರೆ ಕಾಂಗ್ರೆಸ್ ಕಡೆ ಬೆಟ್ಟು ತೋರಿಸಿ ಬಚಾವಾಗುವ ನಿಮ್ಮ ಈ ಹೇಡಿತನದಿಂದ ಪಕ್ಷವೊಂದರ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಎಂದು ನಿರೂಪಿಸಿದ್ದೀರಿ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ADVERTISEMENT

‘ಮಾನ ಮುಚ್ಚಿಕೊಳ್ಳಲು ಕಾಂಗ್ರೆಸ್ ಕಡೆ ಕೈತೋರಿಸುವ ಕಟೀಲ್‌ ‌ಅವರೇ, ಯತ್ನಾಳ್ ಅವರನ್ನು ನಿಭಾಯಿಸಲಾಗಲಿಲ್ಲ. ರೇಣುಕಾಚಾರ್ಯರನ್ನು ನಿಯಂತ್ರಿಸಲಿಲ್ಲ. ಈಶ್ವರಪ್ಪರನ್ನು ಕಂಟ್ರೋಲ್ ಮಾಡಲಿಲ್ಲ. ಶಾಸಕರ, ಸಚಿವರ ಜಗಳ ನಿಲ್ಲಿಸಲಿಲ್ಲ. ನಿಮ್ಮದೇ ಪಕ್ಷದವರಲ್ಲಿ ತಾವು ನಾಲಾಯಕ್ ಎನಿಸಿಕೊಂಡು ಮತ್ತೊಬ್ಬರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ’ ಕಾಂಗ್ರೆಸ್‌ ಟೀಕಿಸಿದೆ.

‘ರಮೇಶ್ ಜಾರಕಿಹೊಳಿಗೆ ಜ್ವರವಂತೆ! ಪಾಪ ಹೇಗಿದ್ದಾರೋ ಎಲ್ಲಿದ್ದಾರೋ. ಪೊಲೀಸರೇ ಕೊಂಚ ವಿಚಾರಿಸಿಕೊಂಡು ಬನ್ನಿ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

‘ದೂರು ನೀಡಿದ ಸಂತ್ರಸ್ತೆಯನ್ನು ಮೂರು ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸದೇ ತಲೆ ಮರೆಸಿಕೊಳ್ಳಲು ಸಹಕರಿಸಲಾಗುತ್ತಿದೆ. ಇತ್ತ ಯುವತಿಯನ್ನು ವಿಚಾರಣೆ ನಡೆಸುತ್ತಿದ್ದರೆ, ಅತ್ತ ಆರೋಪಿ ನಾಪತ್ತೆಯಾಗಿದ್ದಾರೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.