ಬೆಂಗಳೂರು: ದೇಶವಿರೋಧಿ ಚಟುವಟಿಕೆಗಳಿಗೆ ಆಸ್ಪದ ನೀಡಿದ್ದ ಸಿಎಎ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಹಕಾರ ನೀಡಿತ್ತು. ಕೋವಿಡ್ ವಿಚಾರದಲ್ಲಿ ಮಾತ್ರ ಅಸಹಕಾರ ತೋರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೋವಿಡ್ ಲಸಿಕೆ ಅಭಿಯಾನ ಬೆಂಬಲಿಸುವ ಬದಲು ಕಾಂಗ್ರೆಸ್ ದೇಶದ ಜನರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೆಸ್ ಪಕ್ಷದ ಸಹಕಾರ ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವ ಚಟುವಟಿಕೆಗಳಿಗೆ ಮಾತ್ರವೇ?’ ಎಂದು ಪ್ರಶ್ನಿಸಿದೆ.
‘ಭಾರತದಲ್ಲಿ ಲಸಿಕೆ ಕಂಡು ಹಿಡಿದಾಗ, ಲಸಿಕಾ ಅಭಿಯಾನ ನಡೆದಾಗ ಕಾಂಗ್ರೆಸ್ ಪಕ್ಷದ ಮುಖಂಡರು ಇದು ಬಿಜೆಪಿ ಲಸಿಕೆ ಎಂದು ಟೀಕಿಸಿದರು. ಈಗ ದೇಶದ ಎಲ್ಲಾ ಜನರಿಗೂ ಲಸಿಕೆ ಕೊಡಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವುಗಳಲ್ಲಿ ಏಕೆ ಇಷ್ಟೊಂದು ವ್ಯತ್ಯಾಸ?, ದೇಶದ ಪರವಾಗಿ ಕಾಂಗ್ರೆಸ್ ಎಂದು ನಿಲ್ಲುವುದು?’ ಎಂದು ಬಿಜೆಪಿ ಟೀಕಿಸಿದೆ.
‘ಡಿ.ಕೆ.ಶಿವಕುಮಾರ್ ಅವರೇ, ನೀವು ತೋರಿದ ಸಹಕಾರವನ್ನೊಮ್ಮೆ ನೆನಪಿಸಿಕೊಳ್ಳಿ. ಕೋವಿಡ್ ನಡುವೆಯೂ ಸಾವಿರಾರು ಜನರನ್ನು ಸೇರಿಸಿ ಸೈಕಲ್ ಜಾಥಾ ಮಾಡಿದ್ದೀರಾ. ಎರಡು ಮೂರು ಬಾರಿ ದಿನಾಂಕ ಬದಲಾದರೂ ಸೇರಿಸಿ ಪ್ರತಿಜ್ಞಾ ವಿಧಿ ಸಮಾವೇಶ ಮಾಡಿದ್ದೀರಾ. ಜತೆಗೆ, ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದೀರಾ. ಟೀಕಿಸಿದ್ದನ್ನು ಬಿಟ್ಟು ಬೇರೆ ಮಾಡಿದ್ದೇನು!?’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.