ADVERTISEMENT

ಜನರಿಗೆ ಬದುಕುವ ಚಿಂತೆ, ಬಿಜೆಪಿಗೆ ಕುರ್ಚಿ ಕಿತ್ತಾಟದ್ದೇ ಚಿಂತೆ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 13:59 IST
Last Updated 1 ಜೂನ್ 2021, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜನರಿಗೆ ಬದುಕುವ ಚಿಂತೆಯಾದರೆ, ಬಿಜೆಪಿಗೆ ಕುರ್ಚಿ ಕಿತ್ತಾಟದ್ದೇ ಚಿಂತೆಯಾಗಿದೆ. ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದ ಸಂತೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿಯವರು ಒಬ್ಬೊಬ್ಬರಾಗಿ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಆ್ಯಂಫೋಟೆರಿಸಿನ್-ಬಿ ತರುವುದಕ್ಕೆ ಅಲ್ಲ, ಲಸಿಕೆ ತರುವುದಕ್ಕೆ ಅಲ್ಲ, ಜಿಎಸ್‌ಟಿ ಪಾಲು ಕೇಳುವುದಕ್ಕೂ ಅಲ್ಲ. ಇವರ ದೆಹಲಿ ದಂಡಯಾತ್ರೆ!, ಕುರ್ಚಿ ಕಿತ್ತಾಟಕ್ಕೆ ಇರುವ ಆಸಕ್ತಿ ಕೊರೊನಾ ನಿರ್ವಹಣೆಗಿಲ್ಲ’ ಎಂದು ಕಿಡಿಕಾರಿದೆ.

‘ಸದ್ಯ ಸರ್ಕಾರದ ಲೆಕ್ಕಕ್ಕೆ ಸಿಕ್ಕಿರುವ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 1370 ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್) ಪ್ರಕರಣಗಳಿವೆ. ಆದರೆ, ಒಬ್ಬ ವ್ಯಕ್ತಿಯ ಚಿಕಿತ್ಸೆಗೆ 90 ವಯಲ್ಸ್ ಬೇಕಾಗಬಹುದು, ಇಷ್ಟು ಸೋಂಕಿತರಿಗೆ ಕೇವಲ 1930 ವಯಲ್ಸ್ ಆ್ಯಂಫೋಟೆರಿಸಿನ್-ಬಿ ಸಾಲುತ್ತದೆಯೇ? ಕೇಂದ್ರ ಸರ್ಕಾರ ಇಂತಹ ಘೋರ ಅನ್ಯಾಯಕ್ಕೂ ತಲೆಬಾಗಿ ನಿಲ್ಲುವ ಬಿಜೆಪಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ದುರಂತವೇ ಸರಿ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್ ಮಾಡಿದೆ.

ADVERTISEMENT

‘ದೇಶಕ್ಕೆ ಬೇಕಿರುವುದು ವಿಜ್ಞಾನ, ಆದರೆ ಬಿಜೆಪಿ ಹರಡಿದ್ದು ಅಜ್ಞಾನ. ಕಳೆದ 70 ವರ್ಷದಿಂದ ಜನರಲ್ಲಿ ವೈಜ್ಞಾನಿಕ ಮನೋಭಾವದ ಜಾಗೃತಿ ಮೂಡಿಸಿಕೊಂಡು ಬಂದಿದ್ದನ್ನು ಬಿಜೆಪಿ ವ್ಯವಸ್ಥಿತವಾಗಿ ಹಾಳು ಮಾಡಿದೆ. ಲಸಿಕೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಬದಲು ಮೌಢ್ಯ ಬಿತ್ತಿದ್ದೇ ಬಿಜೆಪಿ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.