ADVERTISEMENT

ಅತಿವೃಷ್ಟಿಯಿಂದ ₹ 550 ಕೋಟಿ ನಷ್ಟ: ತಕ್ಷಣ ಕ್ರಮಕ್ಕೆ ಸಿ.ಎಂ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 15:41 IST
Last Updated 8 ಸೆಪ್ಟೆಂಬರ್ 2025, 15:41 IST
   

ಬೆಂಗಳೂರು: ‘ಅತಿವೃಷ್ಟಿಯಿಂದಾಗಿ ಸುಮಾರು ₹ 550 ಕೋಟಿಯ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಬೆಳೆ, ಮನೆ ಹಾನಿಗೆ ಪರಿಹಾರ ಒದಗಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಳೆ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸೋಮವಾರ ಅವರು ವಿಡಿಯೊ ಸಂವಾದ ನಡೆಸಿದರು. ಬಳಿಕ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಮಳೆಯಿಂದ ಸುಮಾರು 5,20,663 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಏಪ್ರಿಲ್​​ನಿಂದ ಈವರೆಗೆ 111 ಮಂದಿ ಸಾವಿಗೀಡಾಗಿದ್ದಾರೆ’ ಎಂದರು.

‘ಮುಂಗಾರು ಹಂಗಾಮಿನಲ್ಲಿ ಚಾಮರಾಜನಗರದಲ್ಲಿ ಶೇ 24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ 20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ವಾಡಿಕೆಗಿಂತ ಶೇ 19ರಷ್ಟು ಹೆಚ್ಚು ಮಳೆಯಾಗಿದ್ದಲ್ಲಿ, ಆ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲು ನಿಯಮಗಳಡಿ ಅವಕಾಶ ಇಲ್ಲ’ ಎಂದರು.

ADVERTISEMENT

‘ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಸಮೀಕ್ಷೆ ಪೂರ್ಣಗೊಳಿಸಿ 10 ದಿನಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ‌’ ಎಂದು ಹೇಳಿದರು.

‘ಮಳೆಗೆ ಸಂಬಂಧಿಸಿದಂತೆ ಸಾವು ಸಂಭವಿಸಿದ ಎಲ್ಲ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. ಒಟ್ಟು ₹ 5.55 ಕೋಟಿ ಪರಿಹಾರ ನೀಡಲಾಗಿದೆ. ಜಾನುವಾರುಗಳು ಸಾವಿಗೀಡಾದ ಪ್ರಕರಣಗಳಲ್ಲಿ ₹ 1.52 ಕೋಟಿ ಪರಿಹಾರ ವಿತರಿಸಲಾಗಿದೆ. ಸಂಪೂರ್ಣ ಹಾನಿಯಾದ 649 ಮನೆಗಳಿಗೆ ಹಾಗೂ ಭಾಗಶಃ ಹಾನಿಯಾದ 8,608 ಮನೆಗಳಿಗೆ ಪರಿಹಾರ ನೀಡಲಾಗಿದೆ’ ಎಂ‌ದರು.

ಬದಲಾವಣೆಗೆ ಸೂಚನೆ:

‘ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಿದೆ. ತುಂಗಭದ್ರಾ ಜಲಾಶಯದಲ್ಲಿ ಮಾತ್ರ ಕಡಿಮೆ ನೀರು ಸಂಗ್ರಹಿಸಲಾಗಿದೆ. ಅಲ್ಲಿನ ಕ್ರೆಸ್ಟ್‌ ಗೇಟುಗಳು ಹಾನಿಯಾಗುತ್ತವೆ ಎಂಬ ವರದಿಯ ಕಾರಣ, ಮುಂಜಾಗ್ರತಾ ಕ್ರಮವಾಗಿ 80 ಟಿಂಎಸಿ ಅಡಿಗೆ ನಿಲ್ಲಿಸಿದ್ದೇವೆ. ಅದರ ಸಾಮರ್ಥ್ಯ 105 ಟಿಂಎಸಿ ಅಡಿ’ ಎಂದು ಮಾಹಿತಿ ನೀಡಿದರು.

‘ತುಂಗಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದೆ. ಎಂಟು ಕ್ರೆಸ್ಟ್‌ ಗೇಟ್​ಗಳು ಅಳವಡಿಕೆಗೆ ಸಿದ್ಧವಿವೆ’ ಎಂದು ಅಧಿಕಾರಿಗಳು ವಿವರಿಸಿದರು.

‘ಅಡಿಕೆ ಮತ್ತು ತೆಂಗು ಬೆಳೆಗಳಿಗೆ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲಿಸಲು ತೋಟಗಾರಿಕಾ ಇಲಾಖೆ ಜತೆ ಪ್ರತ್ಯೇಕ ಸಭೆ ನಡೆಸಲಾಗುವುದು. ಎಲೆಚುಕ್ಕಿ ರೋಗಕ್ಕೆ ಬಜೆಟ್‌ನಲ್ಲಿ ಈಗಾಗಲೇ ಅನುದಾನ ಒದಗಿಸಿದ್ದೇವೆ. ಹಿಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಈಗಲೇ ತಯಾರಿ ಮಾಡುವಂತೆ ಸೂಚನೆ ನೀಡಿದ್ದೇನೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.