ADVERTISEMENT

ಇನ್ನೆರಡು ತಿಂಗಳು ಮಳೆ ಕೊರತೆ ಸಾಧ್ಯತೆ!

ಕೃಷಿ ಮತ್ತು ನೀರಾವರಿ ಮೇಲೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 23:55 IST
Last Updated 2 ಆಗಸ್ಟ್ 2023, 23:55 IST
ಮಳೆ
ಮಳೆ   ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜುಲೈನಲ್ಲಿ ಸುರಿದ ಭಾರಿ ಮಳೆಯಿಂದ ನಾಡಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆಗಲಿದ್ದು, ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ.

ಮಳೆ ಕಡಿಮೆಯಾಗಿ ಒಣ ಹವೆ ಬೀಸಿದರೆ ರಾಜ್ಯದ‌ ವಿವಿಧ ಬೆಳೆಗಳ ಇಳುವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆ ಕಡಿಮೆ ಇದ್ದರೂ ಮಳೆ ಹಂಚಿಕೆ ವ್ಯಾಪಕವಾಗಿದ್ದರೆ ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ಎಲ್‌ನಿನೊ ಪರಿಣಾಮ ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ. ಇದರಿಂದಾಗಿ ಮಳೆ ಪ್ರಮಾಣ ಕಡಿಮೆಯಾಗುವುದರ ಜತೆಗೆ ಉಷ್ಣಾಂಶವೂ ಏರಿಕೆಯಾಗಲಿದೆ.

ADVERTISEMENT

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ರಾಜ್ಯದಲ್ಲಿ ಇಡೀ ವರ್ಷ ಕೃಷಿಗೆ ಮತ್ತು ಕುಡಿಯುವ ಉದ್ದೇಶಕ್ಕೆ ತೊಂದರೆ ಆಗುವುದಿಲ್ಲ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕಬಹುದು ಹಾಗೂ ನೆರೆಯ ತಮಿಳುನಾಡು ಕೂಡ ಕಾವೇರಿಯಿಂದ ನೀರು ಬಿಡುವಂತೆ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನುತ್ತಾರೆ ತಜ್ಞರು.

ಈ ವರ್ಷ ಎಲ್‌ನಿನೊ ವಾತಾವರಣ ಸೃಷ್ಟಿಯಾದರೂ ಸಮಭಾಜಕ ಫೆಸಿಫಿಕ್‌ ಪ್ರದೇಶದಲ್ಲಿ ಅದು ದುರ್ಬಲವಾಗಿಯೇ ಇದೆ. ಎಂಎಂಸಿಎಫ್‌ಎಸ್‌ ಸೇರಿ ವಿವಿಧ ಹವಾಮಾನ ಮುನ್ಸೂಚಕ ಸಂಸ್ಥೆಗಳ ಪ್ರಕಾರ ಎಲ್‌ನಿನೊ ವಾತಾವರಣ ಇನ್ನಷ್ಟು ತೀವ್ರಗೊಳ್ಳಲಿದೆ. ಇದು ಮುಂದಿನ ವರ್ಷದ ಆರಂಭದವರೆಗೆ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.