ADVERTISEMENT

ಮಳೆಯಿಂದ ಉಂಟಾಗಿರುವ ಹಾನಿ; ₹1,100 ಕೋಟಿ ಪರಿಹಾರಕ್ಕೆ ಮನವಿ- ಅಶೋಕ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:13 IST
Last Updated 30 ನವೆಂಬರ್ 2021, 19:13 IST
ಕಂದಾಯ ಸಚಿವ ಆರ್‌.ಅಶೋಕ
ಕಂದಾಯ ಸಚಿವ ಆರ್‌.ಅಶೋಕ    

ಬೆಂಗಳೂರು: ರಾಜ್ಯದಲ್ಲಿ ಈಚೆಗೆ ಬಿದ್ದ ಮಳೆಯಿಂದ ಉಂಟಾಗಿರುವ ಹಾನಿಯ ಪರಿಹಾರಕ್ಕಾಗಿ ಕೇಂದ್ರದಿಂದ ₹1,100 ಕೋಟಿ ನೆರವು ಕೇಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಪರಿಹಾರ ಕೋರಿ ಕೇಂದ್ರಕ್ಕೆ ಸಲ್ಲಿಸಬೇಕಾಗಿರುವ ವರದಿ ತಯಾರಾಗಿದೆ. ಅಲ್ಲದೆ, ಎನ್‌ಡಿಆರ್‌ಎಫ್‌ ನಿಧಿ ಅಡಿ ಪರಿಹಾರ ಕೇಳಲು ಇನ್ನು 3– 4 ದಿನಗಳಲ್ಲಿ ಮನವಿ ಪತ್ರ ಸಿದ್ಧವಾಗಲಿದೆ ಎಂದು ಮಂಗಳವಾರ ಅವರು ಸುದ್ದಿಗಾರರಿಗೆ ಹೇಳಿದರು.

ರಾಜ್ಯದಲ್ಲಿ ನವೆಂಬರ್‌ನಲ್ಲಿ 142 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 263 ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆಯಂತೆ 39 ಮಿ.ಮೀ ಮಳೆ ಆಗಬೇಕಿತ್ತು ಎಂದು ಅವರು ವಿವರಿಸಿದರು.

ADVERTISEMENT

ಮಳೆಯಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು 4.61 ಲಕ್ಷ ರೈತರಿಗೆ ₹318.87 ಕೋಟಿ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅಶೋಕ ಹೇಳಿದರು.

ಬೆಳೆ ಹಾನಿಯ ಪರಿಹಾರ ಪಾವತಿಗೆ ಇದೇ ಮೊದಲ ಬಾರಿಗೆ ಹೊಸ ತಂತ್ರಾಂಶದ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನಮೂದಿಸಿದ ಬಳಿಕ ತ್ವರಿತವಾಗಿ ರೈತರ ಖಾತೆಗಳಿಗೇ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಮಂಗಳವಾರ ಒಂದೇ ದಿನ 1.61 ಲಕ್ಷ ರೈತರಿಗೆ ₹92.30 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ರೈತರ ಬ್ಯಾಂಕ್‌ ಖಾತೆಗಳಿಗೇ ನೇರವಾಗಿ ಹಣ ಜಮೆ ಮಾಡುವುದರಿಂದ, ಮಧ್ಯವರ್ತಿಗಳ ಆಟ ನಡೆಯುವುದಿಲ್ಲ. ಹಿಂದೆ ಮೂರು ತಿಂಗಳಿಗೆ ಒಮ್ಮೆ ಮಾತ್ರ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಈಗ ಎರಡು– ಮೂರು ದಿನಗಳಿಗೊಮ್ಮೆ ತಂತ್ರಾಂಶದಲ್ಲಿ ನಮೂದಿಸಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.