
ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗವು 2025ರ ಫೆಬ್ರುವರಿಯಿಂದ 2026ರ ಜನವರಿ ಅಂತ್ಯದವರೆಗೆ ಒಟ್ಟು 36,474 ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ.
ಅಧಿಕಾರಿಗಳು ಮಾಹಿತಿ ನೀಡದ, ಮಾಹಿತಿ ನಿರಾಕರಿಸಿದ, ತಪ್ಪು ಮಾಹಿತಿ ನೀಡಿದ ಸಂಬಂಧ ಪರಿಹಾರ ಕೋರಿ ಆಯೋಗಕ್ಕೆ ಸಲ್ಲಿಸಿದ್ದ ದ್ವಿತೀಯ ಮೇಲ್ಮನವಿಗಳು ಇವಾಗಿದ್ದವು. 2025ರ ಫೆಬ್ರುವರಿಯಲ್ಲಿ ಆಯೋಗದ ಮುಂದೆ ಇಂತಹ 69,471 ಅರ್ಜಿಗಳು ಇದ್ದವು. ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಆಗಿದ್ದು, 32,997 ಅರ್ಜಿಗಳು ಬಾಕಿ ಉಳಿದಿವೆ.
‘2023ರಿಂದ 2025ರ ಫೆಬ್ರುವರಿವರೆಗೆ ಮೂವರು ಮಾಹಿತಿ ಆಯುಕ್ತರಷ್ಟೇ ಕಾರ್ಯನಿರ್ವಹಿಸುತ್ತಿದ್ದರು. ನಾನು ಅಧಿಕಾರ ವಹಿಸಿಕೊಂಡ ನಂತರ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ತೆಗೆದುಕೊಂಡೆ. ಹೀಗಾಗಿ ಆಯೋಗದ ಮೇಲಿದ್ದ ಅರ್ಜಿಗಳ ಹೊರೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಾಯಿತು’ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ರಾಮನ್ ಕೆ. ಅವರು ಹೇಳಿದ್ದಾರೆ.
‘ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದುದರ ಬಗ್ಗೆ ಮಾಹಿತಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ 23 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಪರಿಣಾಮವಾಗಿ, ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗುವ ಅರ್ಜಿಗಳಿಗೆ ಸರಿಯಾದ ಮಾಹಿತಿ ಒದಗಿಸುವ ಪ್ರಮಾಣ ಶೇ 90ರಷ್ಟಕ್ಕೆ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.