
‘ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ.
–ಪ್ರಜಾವಾಣಿ ಚಿತ್ರ
ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯ ಸರ್ಕಾರದ ಕಡೆಯಿಂದ ಆಯೋಜಿಸುತ್ತಿರುವ ಪಂಚ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ₹18.66 ಕೋಟಿಯಷ್ಟು ಹೆಚ್ಚುವರಿ ಮೊತ್ತವನ್ನು ಎರಡನೇ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಬಜೆಟ್ ಹೊರತಾಗಿ ವೆಚ್ಚ ಮಾಡಿರುವ, ಮಾಡಲಾಗುವ ₹6,279.87 ಕೋಟಿ ಮೊತ್ತದ ಎರಡನೇ ಕಂತಿನ ಪೂರಕ ಅಂದಾಜ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.
ಮುಂದಿನ ವರ್ಷ ದಾವೋಸ್ನಲ್ಲಿನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಗೆ ತೆರಳಲಿರುವ ನಿಯೋಗದ ವೆಚ್ಚಕ್ಕೆ ₹10 ಕೋಟಿ ಒದಗಿಸಲಾಗಿದೆ. ಕೇಂದ್ರದ ಸಹಾನುದಾನ ಹಾಗೂ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಹೊಂದಾಣಿಕೆ ಮೊತ್ತವೂ ಇದರಲ್ಲಿ ಸೇರಿದೆ.
ಮುಖ್ಯಾಂಶಗಳು:
* ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರಧನ ನೀಡಲು ₹1,015.66 ಕೋಟಿ
* ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹೆಲಿಕಾಪ್ಟರ್ ವೆಚ್ಚ ಭರಿಸಲು ಹೆಚ್ಚುವರಿಯಾಗಿ ₹6.37 ಕೋಟಿ
* 68ನೇ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಸಮ್ಮೇಳನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಎರಡೂ ಮನೆಗಳ ಸದಸ್ಯರು ಪಾಲ್ಗೊಂಡಿದ್ದರು. ಪ್ರಯಾಣ ವೆಚ್ಚಕ್ಕೆ ಹೆಚ್ಚುವರಿಯಾಗಿ ಒಟ್ಟು ₹2 ಕೋಟಿ
* 2025–26ನೇ ಸಾಲಿನ ಬೆಳಗಾವಿ ಅಧಿವೇಶನಕ್ಕೆ ಹೆಚ್ಚುವರಿಯಾಗಿ ₹14.50 ಕೋಟಿ
* ಮಾಜಿ ಶಾಸಕರ ರೈಲು, ವಿಮಾನ ಪ್ರಯಾಣ ಭತ್ಯೆಗೆ ₹1.46 ಕೋಟಿ
* ಶಾಸಕರ ಭವನಕ್ಕೆ ಹೊಸ ವಾಹನ ಖರೀದಿಗೆ ಹೆಚ್ಚುವರಿಯಾಗಿ ₹2 ಕೋಟಿ
* ಕಾಮನ್ವೆಲ್ತ್ ಸಂಸದೀಯ ಸಂಘದ ಸಿಪಿಎ ಭಾರತ ಸಂಘದ ಸಮ್ಮೇಳನಕ್ಕೆ ಹೆಚ್ಚುವರಿಯಾಗಿ ₹3.60 ಕೋಟಿ
* ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಮತ್ಸ್ಯ ಮೇಳ ಆಯೋಜಿಸಲು ಹೆಚ್ಚುವರಿಯಾಗಿ ₹4 ಕೋಟಿ
* ವಿವಿಧ ಬಂದರುಗಳ ಅಭಿವೃದ್ಧಿಗೆ ₹3.89 ಕೋಟಿ
* 2025ನೇ ಸಾಲಿನ ಮೈಸೂರು ದಸರಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ₹23.50 ಕೋಟಿ
* ವಿವಿಧ ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಪಾವತಿಗೆ ಹೆಚ್ಚುವರಿಯಾಗಿ ₹100 ಕೋಟಿ
* ಖಾಸಗಿ ದೇವಸ್ಥಾನ, ಮಠಗಳಿಗೆ ಅನುದಾನ ನೀಡಲು ಹೆಚ್ಚುವರಿಯಾಗಿ ₹7.50 ಕೋಟಿ
* 2019, 2020, 2021ನೇ ಸಾಲಿನ ಗುಣಾತ್ಮಕ ಸಿನಿಮಾಗಳಿಗೆ ಸಹಾಯಧನ ಮತ್ತು ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿತರಣೆಗೆ ಹೆಚ್ಚುವರಿಯಾಗಿ ₹18 ಕೋಟಿ
* ವಿವಿಧ ಜೈಲುಗಳಲ್ಲಿ ಬಾಕಿ ಇರುವ ಬಂದಿಗಳ ಕೂಲಿಗೆ ₹17.50 ಕೋಟಿ
ಜಾತಿ ಸಮೀಕ್ಷೆ: ನಿಗಮಗಳಿಗೆ ₹348.36 ಕೋಟಿ ಮರು ಪಾವತಿ
ಹಿಂದುಳಿದ ವರ್ಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ವಿವಿಧ ನಿಗಮಗಳ ಪಿ.ಡಿ ಖಾತೆಯಿಂದ ಒಟ್ಟು ₹348.36 ಕೋಟಿಯನ್ನು ಪಡೆಯಲಾಗಿತ್ತು. ಅದನ್ನು ಆಯಾ ನಿಗಮಗಳಿಗೆ ಮರು ಭರಿಸಲು ಪೂರಕ ಅಂದಾಜಿನಲ್ಲಿ ಅನುದಾನ ನೀಡಲಾಗಿದೆ.
ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ನಿಗಮ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ತಲಾ ₹5 ಕೋಟಿ, ಮರಾಠ ಅಭಿವೃದ್ಧಿ ನಿಗಮದಿಂದ ₹27 ಕೋಟಿ, ಕಾಡುಗೊಲ್ಲ ನಿಗಮದಿಂದ ₹10.36 ಕೋಟಿ, ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ₹150 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಮತ್ತು ಉಪ್ಪಾರ ನಿಗಮದಿಂದ ತಲಾ ₹3 ಕೋಟಿ, ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ತಲಾ ₹7 ಕೋಟಿಯನ್ನು ಸಮೀಕ್ಷೆಗಾಗಿ ಬಳಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.