ADVERTISEMENT

ಕಾಂಗ್ರೆಸ್ ನಿಲುವಿಗೆ ಗದ್ದಲ: ವಿಧಾನ ಪರಿಷತ್ ಕಲಾಪ‌ ಮುಂದೂಡಿಕೆ

ಪ್ರತಿಬಂಧಕಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಬಹಿಷ್ಕಾರದ‌ ವಿಚಾರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 6:44 IST
Last Updated 16 ಮಾರ್ಚ್ 2021, 6:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಿ.ಡಿ. ವಿಚಾರದಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳದಿರುವ ಕಾಂಗ್ರೆಸ್ ನಿಲುವು ವಿಧಾನ ಪರಿಷತ್‌ನಲ್ಲಿ ಗದ್ದಲಕ್ಕೆ ಕಾರಣವಾಗಿದೆ‌. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಉಪ ಸಭಾಪತಿ ಎಂ.ಕೆ.‌ ಪ್ರಾಣೇಶ್ ಪ್ರಶ್ನೋತ್ತರದ ನಡುವೆಯೇ ಹತ್ತು ನಿಮಿಷಗಳ ಕಾಲ‌ ಕಲಾಪ ಮುಂದೂಡಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪ್ರಶ್ನೆ ಕೇಳಬೇಕಿತ್ತು. ನೈತಿಕತೆಯ ಪ್ರಶ್ನೆ ಎತ್ತಿದ ರಮೇಶ್ ಪ್ರಶ್ನೆ ಕೇಳುವುದನ್ನು ಬಹಿಷ್ಕರಿಸಿದರು.

ಬಿಜೆಪಿ ಸದಸ್ಯರು ಉಪ ಪ್ರಶ್ನೆ ಕೇಳಲು ಅವಕಾಶ ಕೋರಿದರು. ಪೀಠದಲ್ಲಿದ್ದ ಉಪ ಸಭಾಪತಿ ಅವಕಾಶ ನೀಡಲು ಮುಂದಾದರು. ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್, ಎಂ. ನಾರಾಯಣಸ್ವಾಮಿ, ಕೆ. ಪ್ರತಾಪಚಂದ್ರ ಶೆಟ್ಟಿ, ಸಿ.ಎಂ. ಇಬ್ರಾಹಿಂ, ಶ್ರೀನಿವಾಸ ಮಾನೆ ಸೇರಿದಂತೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.

ADVERTISEMENT

ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ ಆರಂಭವಾಯಿತು. ಗದ್ದಲದ ನಡುವೆಯೇ ಸಮಜಾಯಿಷಿ ನೀಡಲು ಯತ್ನಿಸಿದ ಸಚಿವ ಸೋಮಶೇಖರ್, 'ಸಿ.ಡಿ ಇದೆ ಎಂದು ನಾವು ನ್ಯಾಯಾಲಯಕ್ಕೆ ಹೋಗಿಲ್ಲ. ನಕಲಿ ಸಿ.ಡಿ ತಯಾರಿಸಿ ತೇಜೋವಧೆ ಮಾಡಬಹುದು ಎಂಬ ಕಾರಣಕ್ಕೆ ಪ್ರತಿಬಂಧಕಾಜ್ಞೆ ತಂದಿದ್ದೇವೆ' ಎಂದರು.

ಗದ್ದಲದ ನಡುವೆಯೇ ಉಪ‌ ಸಭಾಪತಿ, ಬಿಜೆಪಿಯ ಸುನೀಲ್ ಸುಬ್ರಮಣಿ ಅವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದರು. ನಂತರ ಜೆಡಿಎಸ್‌ನ ಕೆ.ಟಿ.‌ ಶ್ರೀಕಂಠೇಗೌಡ ಪ್ರಶ್ನೆ ಕೇಳಬೇಕಿತ್ತು.

ಗದ್ದಲ ಹೆಚ್ಚಾದ ಕಾರಣದಿಂದ ಹತ್ತು ನಿಮಿಷಗಳ ಕಾಲ ಸದನ ಮುಂದೂಡಿದ ಉಪ ಸಭಾಪತಿ, ಸಭಾ ನಾಯಕರು ಮತ್ತು ವಿರೋಧ ಪಕ್ಷದ ನಾಯಕರನ್ನು ಸಂಧಾನಕ್ಕಾಗಿ ತಮ್ಮ ಕೊಠಡಿಗೆ ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.