ADVERTISEMENT

ಎಂಜಿನಿಯರಿಂಗ್‌ ಕೋರ್ಸ್‌ಗಳ ಸೀಟ್‌ ಬ್ಲಾಕಿಂಗ್‌ ಪ್ರಕರಣ: ಕೆಇಎ ಹದ್ದಿನ ಕಣ್ಣು

ಪ್ರವೇಶ ಪಡೆಯದ 667 ವಿದ್ಯಾರ್ಥಿಗಳಿಗೆ ನೋಟಿಸ್‌

ಚಂದ್ರಹಾಸ ಹಿರೇಮಳಲಿ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ಸೀಟ್‌ ಬ್ಲಾಕಿಂಗ್‌ ಪ್ರಕರಣಗಳತ್ತ ಹದ್ದಿನ ಕಣ್ಣು ನೆಟ್ಟಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಅಂತಿಮ ಸುತ್ತಿನ ಸೀಟು ಹಂಚಿಕೆಯ ನಂತರ ಪ್ರವೇಶ ಪಡೆಯದ 667 ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಿದೆ.

2024–25ನೇ ಸಾಲಿನ ಪ್ರವೇಶದ ವೇಳೆ ಸೀಟ್‌ ಬ್ಲಾಕಿಂಗ್‌ ಪ್ರಕರಣವನ್ನು ಪತ್ತೆ ಮಾಡಲಾಗಿತ್ತು. ಎಂಜಿನಿಯರಿಂಗ್‌ ಕೋರ್ಸ್‌ಗಳ ಸೀಟ್‌ ಬ್ಲಾಕಿಂಗ್‌ ದಂಧೆ ನಡೆಸುತ್ತಿದ್ದವರ ವಿರುದ್ಧ ಮಲ್ಲೇಶ್ವರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯಲ್ಲಿ (ಸೈಬರ್) ಎಫ್‌ಐಆರ್ ದಾಖಲಿಸಲಾಗಿತ್ತು. ಕೆಲ ಕಾಲೇಜುಗಳ ಆಡಳಿತ ಮಂಡಳಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಧ್ಯವರ್ತಿಗಳನ್ನು ಬಂಧಿಸಲಾಗಿತ್ತು. 

ADVERTISEMENT

ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜುಗಳಿಗೆ ಪ್ರವೇಶ ಪಡೆಯದೆ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದರು ಎಂದು ಕೆಇಎ ಆರೋಪಿಸಿತ್ತು. ಅಂತಹ 2,348 ವಿದ್ಯಾರ್ಥಿಗಳಿಗೆ ಕೆಇಎ ನೋಟಿಸ್‌ ನೀಡಿತ್ತು. ಉತ್ತರ ನೀಡದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಬರೆದಿದ್ದರು. ಅಂಥವರ ಶ್ರೇಯಾಂಕವನ್ನು ತಡೆಹಿಡಿಯಲಾಗಿತ್ತು. ಪರಿಶೀಲನೆಯ ನಂತರ, ಸಕಾರಣ ನೀಡಿದ ಕೆಲವರಿಗೆ ಸೀಟು ಹಂಚಿಕೆ ಮಾಡಲಾಗಿತ್ತು.

ಬಹುಬೇಡಿಕೆ ಇರುವ ಕಂಪ್ಯೂಟರ್ ಸೈನ್ಸ್‌ನ 30,573 ಸೀಟುಗಳು, ಕೃತಕ ಬುದ್ಧಿಮತ್ತೆ 7,209, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ 19,407, ಮಾಹಿತಿ ವಿಜ್ಞಾನದ 10,473 ಸೀಟುಗಳೂ ಸೇರಿ 2025–26ನೇ ಸಾಲಿನಲ್ಲಿ 1.41 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಾಗಿದ್ದವು. ಸಿಇಟಿಯಲ್ಲಿ ಪಡೆದ ಅರ್ಹತೆ ಆಧಾರದಲ್ಲಿ ಕೋರ್ಸ್‌, ಕಾಲೇಜುಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಕೆಲವರು ಕೊನೆಯ ಸುತ್ತಿನ ಸೀಟು ಹಂಚಿಕೆಯ ನಂತರವೂ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ. ಅಂತಹ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಕೆಇಎ ಪತ್ರ ಬರೆದಿತ್ತು. ಈಗ ವಿದ್ಯಾರ್ಥಿಗಳಿಗೇ ನೇರವಾಗಿ ನೋಟಿಸ್‌ ಜಾರಿ ಮಾಡಿದ್ದು, ಪ್ರವೇಶ ಪಡೆಯದೆ ಇರಲು ಕಾರಣಗಳೇನು ಎನ್ನುವ ಕುರಿತು ದಾಖಲೆ ಸಹಿತ ವಿವರ ನೀಡುವಂತೆ ಸೂಚಿಸಿದೆ. 

ಖಾತ್ರಿ ಠೇವಣಿಗೂ ಸಿಗದ ಹಿಡಿತ

ಸಿಇಟಿ ಕೋರ್ಸ್‌ಗಳ ಪ್ರವೇಶಕ್ಕೆ ಮೂರನೇ ಸುತ್ತಿನಲ್ಲಿ ಭಾಗವಹಿಸುವ ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳಿಗೂ ಈ ಬಾರಿ ತಲಾ ₹10 ಸಾವಿರ ಖಾತ್ರಿ ಠೇವಣಿ ಕಡ್ಡಾಯಗೊಳಿಸಲಾಗಿತ್ತು. ಹಣ ಜಮೆ ಮಾಡಿದ ನಂತರವೇ ಕಾಲೇಜು, ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಖಾತ್ರಿ ಠೇವಣಿ ಪಾವತಿಸಿದರೂ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ.

ಪರೀಕ್ಷೆಗೆ ನೀಡಿದ್ದ ಪ್ರವೇಶ ಪತ್ರದ ಜತೆಗಿನ ಪೋಟೊಗೆ ಹೋಲಿಕೆ ಮಾಡಿ ಅದೇ ವಿದ್ಯಾರ್ಥಿ ಎಂದು ಪತ್ತೆ ಹಚ್ಚಲು ಪೋರ್ಟಲ್‌ ಅಭಿವೃದ್ಧಿಪಡಿಸಲಾಗಿತ್ತು. ಒಂದು ಮೊಬೈಲ್‌ನಿಂದ ಒಂದು ಅರ್ಜಿ ಸಲ್ಲಿಕೆಗಷ್ಟೇ ಅವಕಾಶ ನೀಡಲಾಗಿತ್ತು. ಒಟಿಪಿ ಕಡ್ಡಾಯಗೊಳಿಸಲಾಗಿತ್ತು. ಮೊದಲ ಹಾಗೂ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಕಾಲೇಜುಗಳಿಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳ ಮಾಹಿತಿಯನ್ನು ಪೋರ್ಟಲ್‌ ಮೂಲಕ ಪಡೆದು, ಅಂತಹ ಎಲ್ಲ ಸೀಟುಗಳನ್ನೂ ಮೂರನೇ ಸುತ್ತಿಗೆ ಪರಿಗಣಿಸಲಾಗಿತ್ತು. ನಕಲಿ ವಿದ್ಯಾರ್ಥಿಗಳ ಪ್ರವೇಶಕ್ಕೂ ಕಡಿವಾಣ ಹಾಕಲಾಗಿತ್ತು. ಆದರೆ, ಅಂತಿಮ ಸುತ್ತಿನ ಸೀಟು ಉಳಿಕೆಯಾದರೆ ಮತ್ತೆ ಹಂಚಿಕೆ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ಹಾಗಾಗಿ, ಪ್ರವೇಶ ಪಡೆಯದ ವಿದ್ಯಾರ್ಥಿಗಳ ವಿರುದ್ಧ ಕೆಇಎ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. 

ಕೊನೆ ಸುತ್ತಿನ ಸೀಟು ಹಂಚಿಕೆ ನಂತರಪ್ರವೇಶ ಪಡೆಯುವುದು ಕಡ್ಡಾಯ. ಆದರೂ ಕೆಲವರು ಪ್ರವೇಶ ಪಡೆದಿಲ್ಲ.ಇದರಿಂದ ಅವರ ಹಿಂದಿದ್ದ ವಿದ್ಯಾರ್ಥಿ ಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ
ಎಚ್‌.ಪ್ರಸನ್ನ,ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.