ಕಲಬುರಗಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 708 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳಿಗೆ ‘ಅಧಿಕ ಶುಲ್ಕ’ದ ಬರೆ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೃಷಿ ಮಾರಾಟ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ತಾಂತ್ರಿಕ ಶಿಕ್ಷಣ ಇಲಾಖೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿ 8 ಇಲಾಖೆಗಳ ಎಫ್ಡಿಎ, ಎಸ್ಡಿಎ, ಕಿರಿಯ ಸಹಾಯಕ, ಸಹಾಯಕ ಲೆಕ್ಕಿಗ, ನಿರ್ವಾಹಕ, ಗ್ರಂಥಪಾಲಕ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು ಒಂದು ಅರ್ಜಿ ಸಲ್ಲಿಸಲು ₹ 750 ಪಾವತಿಸಬೇಕಿದೆ. ಹೆಚ್ಚುವರಿಯಾಗಿ ಅಭ್ಯರ್ಥಿಗಳು ಎಷ್ಟು ಅರ್ಜಿಗಳನ್ನು ಸಲ್ಲಿಸುತ್ತಾರೋ ಹೆಚ್ಚುವರಿಯಾಗಿ ಪ್ರತಿ ಅರ್ಜಿಗೆ ₹ 100 ಪಾವತಿಸಬೇಕಿದೆ.
ಪಿಯುಸಿ, ಪದವಿ ಅರ್ಹತೆ ಅಭ್ಯರ್ಥಿಗಳು ಆಹ್ವಾನಿಸಿದ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸುಮಾರು ₹ 2,100 ಪಾವತಿಸಬೇಕಿದೆ. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ ₹ 500 ಶುಲ್ಕ ನಿಗದಿಸಿದೆ. ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾದರೆ ₹ 1,600 ಶುಲ್ಕ ಪಾವತಿಸಬೇಕಿದೆ. ಇನ್ನಿತರೆ ವಿದ್ಯಾರ್ಹತೆಯವರು ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಶುಲ್ಕ ಇನ್ನೂ ಹೆಚ್ಚುವರಿಯಾಗಲಿದೆ.
ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2023ರ ನವೆಂಬರ್ನಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಾಮಾನ್ಯ ವರ್ಗದವರಿಗೆ ₹ 500, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ₹ 300 ಹಾಗೂ ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ ₹200 ಶುಲ್ಕ ವಿಧಿಸಿತ್ತು.
ಕೆಪಿಎಸ್ಸಿ ವತಿಯಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 600, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ₹ 300 ಹಾಗೂ ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಿದೆ.
‘ಸುಮಾರು ಎರಡು ವರ್ಷದಿಂದ ಯಾವುದೇ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ. ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತ ಅಭ್ಯರ್ಥಿಗಳು ಓದುತ್ತ ಇದ್ದಾರೆ. ಅರ್ಧದಷ್ಟಾದರೂ ಶುಲ್ಕ ಕಡಿತ ಮಾಡಬೇಕು. ಪ್ರತ್ಯೇಕ ಶುಲ್ಕ ವಿಧಿಸುವುದು ಕೈ ಬಿಡಬೇಕು ಎನ್ನುತ್ತಾರೆ ಸ್ಪರ್ಧಾ ಆಕಾಂಕ್ಷಿ ಸುನಿಲ ಸಿಡ್ಲಿ.
ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಮಾದರಿಯಲ್ಲಿ ಶುಲ್ಕ ವಿಧಿಸಿ ಅಭ್ಯರ್ಥಿಗಳಿಗೆ ಸಹಾಯವಾಗಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕುಉದಯ ಸೂರಿ ಸ್ಪರ್ಧಾ ಆಂಕಾಕ್ಷಿ
‘5 ವರ್ಷದಿಂದ ಶುಲ್ಕ ಹೆಚ್ಚಳ ಮಾಡಿಲ್ಲ’
‘ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಹಿಂದಿಗಿಂತಲೂ ಅಧಿಕ ವೆಚ್ಚವಾಗುತ್ತದೆ. ವಿದ್ಯಾರ್ಥಿಗಳಿಗೆ ಹೊರೆ ಆಗಬಾರದು ಎಂಬ ದೃಷ್ಟಿಯಿಂದ 5 ವರ್ಷದಿಂದ ಶುಲ್ಕ ಹೆಚ್ಚಳ ಮಾಡಿರಲಿಲ್ಲ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪರೀಕ್ಷೆ ನಡೆಸಲು ಪ್ರಾಧಿಕಾರವೇ ಎಲ್ಲ ವೆಚ್ಚ ಭರಿಸಲಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಆಗಬಾರದು ಎಂದು ಎಂಟು ಇಲಾಖೆಗಳಿಂದ ಪ್ರತ್ಯೇಕ ಅಧಿಸೂಚನೆ ಹೊರಡಿಸದೇ ಒಂದೇ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.