ADVERTISEMENT

ಕೇರಳ ಪ್ರವಾಹ: ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪರಿಹಾರ ಸಾಮಗ್ರಿ ರವಾನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2018, 7:24 IST
Last Updated 19 ಆಗಸ್ಟ್ 2018, 7:24 IST
   

ಬೆಂಗಳೂರು: ಕೇರಳ ಪ್ರವಾಹ ಸಂತ್ರಸ್ತರಿಗೆ ರೈಲ್ವೆ ಇಲಾಖೆ ಮತ್ತು ಉದ್ಯೋಗಿಗಳು ಸೇರಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ಹೊದಿಕೆ, ಬಟ್ಟೆ, ನೀರು, ಆಹಾರ ಧಾನ್ಯ, ಔಷಧ, ನ್ಯಾಪ್‌ಕಿನ್‌ಗಳು, ಸಿದ್ಧ ಆಹಾರ, ಎಣ್ಣೆ, ಈರುಳ್ಳಿ... ಹೀಗೆ ನೂರಾರು ಬಗೆಯ ಸಾಮಗ್ರಿಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಂಗ್ರಹವಾಗಿವೆ.

ಇದುವರೆಗೆ 15 ಟನ್ ಗಳಿಗೂ ಅಧಿಕ ಸಾಮಗ್ರಿಗಳು ಸಂಗ್ರಹವಾಗಿವೆ. ಇದನ್ನು ಪಾಲಕ್ಕಾಡ್ ಜಂಕ್ಷನ್ ನಿಲ್ದಾಣಕ್ಕೆ ಕಳುಹಿಸಲಾಗುವುದು. ಅಲ್ಲಿನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಗತ್ಯವಿರುವ ಕಡೆಗೆ ರವಾನಿಸಲಾಗುವುದು ಎಂದು ಈ ಸಾಮಗ್ರಿ ರವಾನೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ ಕೆ.ಆಸಿಫ್ ವಿವರಿಸಿದರು.

ಈ ಸಾಮಗ್ರಿ ರವಾನಿಸಲು ಪಾರ್ಸೆಲ್ ಬೋಗಿಯೊಂದನ್ನು ಮೀಸಲಿರಿಸಲಾಗಿದೆ. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಾಮಗ್ರಿ ಸಂಗ್ರಹ ಮತ್ತು ಜೋಡಣೆಯಲ್ಲಿ ತೊಡಗಿದ್ದಾರೆ. ಸ್ಕೌಟ್‌ನಲ್ಲಿತರಬೇತಿ ಪಡೆದ ಇಲಾಖೆಯ ಸಿಬ್ಬಂದಿಯನ್ನು ಸ್ವಯಂ ಸೇವಕರನ್ನಾಗಿ ಕಳುಹಿಸಲಾಗುವುದು ಎಂದು ಅವರು ವಿವರಿಸಿದರು.

ADVERTISEMENT

ರಾಜ್ಯದ ಇತರ ನಿಲ್ದಾಣಗಳಲ್ಲೂ ಪರಿಹಾರ ಸಾಮಗ್ರಿ ಸಂಗ್ರಹ ನಡೆದಿದೆ. ರೈಲುಗಳ ಲಭ್ಯತೆ ಆಧಾರದ ಮೇಲೆ ಸಾಮಗ್ರಿಗಳನ್ನು ಕಳುಹಿಸಲಾಗುವುದು ಎಂದು ಆಸಿಫ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.