ADVERTISEMENT

ಕೇರಳದಲ್ಲಿ ಬಿಜೆಪಿಯತ್ತ ಒಲವು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:03 IST
Last Updated 28 ಫೆಬ್ರುವರಿ 2021, 16:03 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಕೇರಳದಲ್ಲಿ ಜನರು ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಗಳ ದುರಾಡಳಿತದಿಂದ ಬೇಸತ್ತುಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದು ಬಿಜೆಪಿಯ ಕೇರಳ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ನೆಲೆಸಿರುವ ಕೇರಳದ ಜನರೊಂದಿಗೆ ಭಾನುವಾರ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎರಡೂ ಮೈತ್ರಿಕೂಟಗಳು 70 ವರ್ಷಗಳಿಂದ ಕೇರಳದ ಜನರನ್ನು ಕತ್ತಲೆಯಲ್ಲಿಟ್ಟು, ರಾಜಕೀಯ ಮಾಡುತ್ತಿವೆ. ಎರಡೂ ಮೈತ್ರಿಕೂಟಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದರು.

ಎಲ್‌ಡಿಎಫ್‌ ಮೈತ್ರಿಕೂಟದ ಸರ್ಕಾರ ರಾಜಕೀಯ ಕಿರುಕುಳ, ರಾಜಕೀಯ ವೈಷಮ್ಯದ ಕೊಲೆ ಹಾಗೂ ಸೇಡಿನ ರಾಜಕೀಯದಲ್ಲೇ ಮುಳುಗಿದೆ. ಎರಡೂ ಮೈತ್ರಿಕೂಟಗಳು ಜಾತಿ, ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಿವೆ ಎಂದು ದೂರಿದರು.

ADVERTISEMENT

‘ಎಲ್‌ಡಿಎಫ್‌ ಮೈತ್ರಿಕೂಟದ ಆಡಳಿತದಿಂದ ಕೇರಳಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಎಡ ಪಕ್ಷಗಳು ದೇಶಕ್ಕೆ ಅಪ್ರಸ್ತುತವಾಗಿವೆ. ಹಲವು ಪಕ್ಷಗಳಿಗೆ ಕೇರಳದಲ್ಲಿ ನಾಯಕತ್ವವೇ ಇಲ್ಲ. ಬಿಜೆಪಿಯ ಸಂಘಟನೆ ಬಲವಾಗಿದೆ. ಈ ಬಾರಿ ಬಿಜೆಪಿ ಕೇರಳದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.