ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯವು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರವಾಗಿದೆ. ನಿತ್ಯ ಇಲ್ಲಿಗೆ ಸುಮಾರು 1 ಸಾವಿರ ಭಕ್ತರು ಭೇಟಿ ಕೊಡುತ್ತಾರೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ 3 ಸಾವಿರ ದಾಟುತ್ತದೆ.
ದೇವಾಲಯದಲ್ಲಿ ಮುಡಿ (ಕೂದಲು) ಕೊಡುವ ಭಕ್ತರ ಸ್ನಾನಕ್ಕೆ ಮುಜರಾಯಿ ಇಲಾಖೆಯಿಂದ ಸ್ನಾನಗೃಹದ ವ್ಯವಸ್ಥೆ ಮಾಡಲಾಗಿದೆ. ಆದರೆ, ನೀರು ಹಾಗೂ ಸ್ವಚ್ಛತೆ ಸಮಸ್ಯೆಯ ಕಾರಣಕ್ಕೆ ಭಕ್ತರು ಸ್ನಾನಗೃಹದತ್ತ ಹೋಗುತ್ತಿಲ್ಲ. ಬದಲಿಗೆ ದೇವಸ್ಥಾನದ ಅಕ್ಕಪಕ್ಕದ ಮನೆಗಳಲ್ಲಿ ಬಿಸಿ ನೀರು ಖರೀದಿಸಿ ಸ್ನಾನ ಮಾಡುವ ಸ್ಥಿತಿ ಇದೆ. ಬರದ ಕಾರಣಕ್ಕೆ ಒಂದು ಬಕೆಟ್ ಬಿಸಿ ನೀರಿಗೆ ₹ 20 ನೀಡಬೇಕಾಗಿದೆ.
ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗಣಪತಿ ದೇವಸ್ಥಾನ ಸಹ ಪ್ರಮುಖ ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಭಕ್ತರ ವಿಶ್ರಾಂತಿಗಾಗಿ ₹ 1 ಕೋಟಿ ಅಂದಾಜು ವೆಚ್ಚದಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಿಸಲಾಗಿದೆ. ಆದರೆ, ನೀರಿನ ಸಮಸ್ಯೆ ಕಾರಣಕ್ಕೆ ಯಾತ್ರಿ ನಿವಾಸ ಕಟ್ಟಡದ ಕೊಠಡಿಗಳನ್ನು ಭಕ್ತರಿಗೆ ಬಾಡಿಗೆಗೆ ಕೊಡುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.