ADVERTISEMENT

ಬೆಂಗಳೂರು: ಕೋಣನಕುಂಟೆ ಕೊಲೆ ಪ್ರಕರಣ, 9 ಯುವಕರ ಸೆರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 6:33 IST
Last Updated 10 ಜನವರಿ 2022, 6:33 IST
ಆರೋಪಿಗಳಿಂದ ಜಪ್ತಿ ಮಾಡಿರುವ ಲಾಂಗ್‌, ಡ್ರ್ಯಾಗರ್‌, ಹಾಕಿ ಸ್ಟಿಕ್‌ ಹಾಗೂ ಮರದ ದೊಣ್ಣೆ
ಆರೋಪಿಗಳಿಂದ ಜಪ್ತಿ ಮಾಡಿರುವ ಲಾಂಗ್‌, ಡ್ರ್ಯಾಗರ್‌, ಹಾಕಿ ಸ್ಟಿಕ್‌ ಹಾಗೂ ಮರದ ದೊಣ್ಣೆ   

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ‌‌ಮೆಹಬೂಬ್‌ (19) ಎಂಬ ಯುವಕನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ 9 ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

‘ಎನ್‌.ಕಿರಣ್‌ ಯಾನೆ ಜಾಕ್ಸನ್‌ (19), ಎಸ್‌.ಪವನ್‌ ಯಾನೆ ಸೊಳ್ಳೆ (19), ಎನ್‌.ಕಾರ್ತಿಕ್‌ (19), ಮಣಿಕಂಠ ಯಾನೆ ಮಣಿ (19), ಪವನ್‌ ಕುಮಾರ್‌ ಯಾನೆ ಪುಟ್ಟೇನಹಳ್ಳಿ ಪವನ (20), ಯು.ಅಭಿಷೇಕ್‌ ಯಾನೆ ಪೋಲಾರ್ಡ್‌ (19), ಬಿ.ಎಸ್‌.ಅನಿಲ್‌ಕುಮಾರ್‌ ಯಾನೆ ಅನಿ (20), ಬಿ.ಟಿ.ಮುನೇಶ್‌ ಕುಮಾರ್‌ ಯಾನೆ ಮುನೇಶ್‌ (19), ಟಿ.ಶಶಾಂಕ್‌ (18) ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಲಾಂಗ್‌, ಡ್ರ್ಯಾಗರ್‌, ಹಾಕಿ ಸ್ಟಿಕ್‌, ಮರದ ದೊಣ್ಣೆ ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಕರಣದ ನಾಲ್ಕನೇ ಆರೋಪಿ ಕಿರಣ್‌ ಯಾನೆ ಬಚ್ಚನ್‌ ಹಾಗೂ ಐದನೇ ಆರೋಪಿ ಹರ್ಷ ಯಾನೆ ಪುಳ್ಚಾರ್‌ ತಲೆಮರೆಸಿಕೊಂಡಿದ್ದಾರೆ. ಮೂವರು ಬಾಲಕರನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಮೊಬೈಲ್‌ನಲ್ಲಿ ‘ಫ್ರೀ ಫೈರ್‌’ ಆ್ಯಪ್‌ನ ಅಕೌಂಟ್‌ ಖರೀದಿಸಲು ಸಾಲವಾಗಿ ಕೊಟ್ಟಿದ್ದ ₹1,200 ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದ ವೇಳೆ ಯುವಕರ ನಡುವೆ ಇದೇ 4ರಂದು ಗಲಾಟೆ ನಡೆದಿತ್ತು. ಈ ವೇಳೆ ಮಂಜುನಾಥ್ ಹಾಗೂ ಮೆಹಬೂಬ್‌ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೆಹಬೂಬ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.