ADVERTISEMENT

ಕೊಪ್ಪಳಕ್ಕೆ ಬಂದ ಕರಡಿ ಸೆರೆ

ನಾಲ್ಕು ತಾಸು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:19 IST
Last Updated 3 ಜುಲೈ 2019, 19:19 IST
ಕೊಪ್ಪಳದ ಕಾವ್ಯಾನಂದ (ಈಶ್ವರ) ಪಾರ್ಕ್ ಸಮೀಪದ ನ್ಯಾಯಾಧೀಶರ ವಸತಿಗೃಹದ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಅವಿತುಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು
ಕೊಪ್ಪಳದ ಕಾವ್ಯಾನಂದ (ಈಶ್ವರ) ಪಾರ್ಕ್ ಸಮೀಪದ ನ್ಯಾಯಾಧೀಶರ ವಸತಿಗೃಹದ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಅವಿತುಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು   

ಕೊಪ್ಪಳ: ಇಲ್ಲಿಯ ಎಪಿಎಂಸಿಯಲ್ಲಿ ಬುಧವಾರ ಬೆಳಿಗ್ಗೆ ಕರಡಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತು. ಜನರ ಗದ್ದಲಕ್ಕೆ ಹೆದರಿ ಜೆ.ಪಿ ಮಾರುಕಟ್ಟೆಯನ್ನು ಹೊಕ್ಕಿತ್ತು. ಅಲ್ಲಿಂದ ಈಶ್ವರ ಪಾರ್ಕ್‌ ಸಮೀಪದ ನ್ಯಾಯಾಧೀಶರ ವಸತಿಗೃಹದ ಕಾರ್‌ ಪಾರ್ಕಿಂಗ್‌ ಸ್ಥಳದಲ್ಲಿ ಅವಿತುಕೊಂಡಿತು.

ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಿ ವಸತಿಗೃಹದ ಮಾರ್ಗದ ಪ್ರವೇಶ ಬಂದ್ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ನಾಲ್ಕು ತಾಸು ಆಗಿತ್ತು.

ಕಮಲಾಪುರದ ವನ್ಯಜೀವಿ ಮತ್ತು ಅರಿವಳಿಕೆ ತಜ್ಞ ನಿಖಿಲ್ ಅರಿವಳಿಕೆ ನೀಡಿದರೂ ಅದು ಬೇಗ ನಿತ್ರಾಣಗೊಳ್ಳಲಿಲ್ಲ. ಅದರ ಆರ್ಭಟ, ಕಿರುಚಾಟಕ್ಕೆ ಜನ ಮತ್ತಷ್ಟು ಭಯಗೊಂಡರು. ನಂತರ ಇನ್ನೊಂದು ಅರಿವಳಿಕೆ ನೀಡಿ ನಿಸ್ತೇಜಗೊಳಿಸಿ ಸೆರೆ ಹಿಡಿಯಲಾಯಿತು. ಅರಣ್ಯ ಇಲಾಖೆಯವರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿದರು.

ADVERTISEMENT

‘ಅಂದಾಜು ಐದು ವರ್ಷ ಪ್ರಾಯದ ಗಂಡು ಕರಡಿ ಇದಾಗಿದ್ದು, 100 ಕೆಜಿ ತೂಕ ಇದೆ. ಪಕ್ಕದಲ್ಲಿರುವ ಗುಡ್ಡದಿಂದ ನಗರಕ್ಕೆ ಬಂದಿತ್ತು. ಮುನಿರಾಬಾದ್‌ ಅರಣ್ಯ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗಿದ್ದೇವೆ.ಆರೋಗ್ಯ ತಪಾಸಣೆ ನಡೆಸಿ ಗದಗ ಬಳಿಯ ಬಿಂಕದಕಟ್ಟಿಯ ಮಿನಿ ಮೃಗಾಲಯ ಅಥವಾ ಬಳ್ಳಾರಿ ಜಿಲ್ಲೆಯ ದರೋಜಿ ಕರಡಿ ಧಾಮಕ್ಕೆ ಬಿಡಲಾಗುವುದು’ ಎಂದುಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯಶಪಾಲ್ ಕ್ಷೀರಸಾಗರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.