ಕುಷ್ಟಗಿ (ಕೊಪ್ಪಳ): ಸಮೀಪದ ಲಿಂಗನಬಂಡಿ ಗ್ರಾಮದ ಬಳಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಪರಿಶೀಲನೆಗೆ ಶನಿವಾರ ಅಧಿಕಾರಿಗಳು ತೆರಳಿದಾಗ ಡೀಸೆಲ್ ಬ್ಯಾರಲ್ ಏಕಾಏಕಿ ಸಿಡಿದು ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಮತ್ತು ವಾಹನ ಚಾಲಕ ಗಾಯಗೊಂಡಿದ್ದಾರೆ.
ಭೂ ವಿಜ್ಞಾನಿ ದಿನೇಶ್ ಹಾಗೂ ಎಂಜಿನಿಯರ್ ನವೀನಕುಮಾರ ಅವರ ಕೈ ಕಾಲುಗಳು ಮತ್ತು ಮುಖದ ಭಾಗದಲ್ಲಿ ತ್ರೀವ ಸುಟ್ಟ ಗಾಯಗಳಾಗಿವೆ.
ಆಗಿದ್ದೇನು?: ಲಿಂಗನಬಂಡಿಯ ಪುರಾತನ ಮೌನೇಶ್ವರ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಅನೇಕ ದಿನಗಳಿಂದ ಇಳಕಲ್ನ ವ್ಯಕ್ತಿಯೊಬ್ಬರು ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಹೀಗಾಗಿ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಹೋದರು. ಆಗ ಕೆಲಸಗಾರರು ಯಂತ್ರಗಳು, ವಾಹನ ಬಿಟ್ಟು ಪರಾರಿಯಾದರು. ಅಧಿಕಾರಿಗಳು ಸ್ಥಳ ಪರಿಶೀಲಿಸುತ್ತಿದ್ದಾಗ ಡೀಸೆಲ್ ತುಂಬಿದ್ದ ಬ್ಯಾರಲ್ ಉರುಳಿಸಿದಾಗ ಅದು ಸ್ಫೋಟಗೊಂಡು ಬೆಂಕಿಹೊತ್ತಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.