ADVERTISEMENT

ಬಿಜೆಪಿ ಜತೆ ಒಳ ಒಪ್ಪಂದ; ಆಣೆ ಮಾಡಲು ಎಚ್‌ಡಿಕೆಗೆ ಸವಾಲು

ಜೆಡಿಎಸ್‌ ವ್ಯಾಪಾರಿ ಪಕ್ಷ: ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಲೇವಡಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 22:40 IST
Last Updated 6 ಜನವರಿ 2021, 22:40 IST
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತು ಪರಮೇಶ್ವರ್ ಮಾತುಕತೆ
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತು ಪರಮೇಶ್ವರ್ ಮಾತುಕತೆ   

ಕೊರಟಗೆರೆ: ‘ಜೆಡಿಎಸ್ ಒಂದು ವ್ಯಾಪಾರಿ ಪಕ್ಷ. ಕಾಂಗ್ರೆಸ್ ಇದ್ದಿದ್ದರಿಂದಲೇ ದೇವೇಗೌಡರು ಪ್ರಧಾನಿಯಾದರು. ಎಲ್ಲೋ ಮಲಗಿದ್ದ ಎಚ್.ಡಿ.ಕುಮಾರಸ್ವಾಮಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತು. ಆದರೀಗ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತರಾಟೆಗೆ ತೆಗೆದುಕೊಂಡರು.

ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲೇಬೇಕೆಂದು ಕುಮಾರಸ್ವಾಮಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡರು. ಅದನ್ನ ಸುಳ್ಳು ಎಂದು ವಾದ ಮಾಡುವುದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ದೇವೇಗೌಡ ಅವರು ಸ್ವಂತ ತಮ್ಮನ ಕುಟುಂಬಕ್ಕೆ ಒಳ್ಳೆಯದನ್ನು ಮಾಡದವರು ಒಕ್ಕಲಿಗ ಸಮುದಾಯಕ್ಕೆ ಇನ್ನೇನು ಒಳ್ಳೆಯದನ್ನು ಮಾಡುತ್ತಾರೆ. ಅವರು ಜಾತಿವಾದಿಯಲ್ಲ. ಬದಲಾಗಿ ಕುಟುಂಬವಾದಿ. ಇಲ್ಲಿವರೆಗೆ ಎಷ್ಟು ಜನ ಒಕ್ಕಲಿಗರಿಗೆ ಒಳ್ಳೆದನ್ನು ಮಾಡಿದ್ದಾರೆ. ಅವಕಾಶವಾದಿಗಳನ್ನ ಹೇಗೆ ನಂಬೋದು. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಬಂದ ಮೇಲೆ ಕಾಂಗ್ರೆಸ್‌ಗೆ ಶಕ್ತಿ ಬಂದಿದೆ. ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಲ್ಲಿ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.