ADVERTISEMENT

ರಾಜ್ಯಕ್ಕೆ ಕೃಷಿ ಕರ್ಮಣ್ಯ ಪ್ರಶಸ್ತಿಯ ಗರಿ

ರೈತರ ಕಾಯಕ, ದ್ವಿದಳ ಧಾನ್ಯಗಳ ಇಳುವರಿ ಹೆಚ್ಚಳಕ್ಕಾಗಿ ₹1 ಕೋಟಿ ಪುರಸ್ಕಾರ

ಪೀರ್‌ ಪಾಶ, ಬೆಂಗಳೂರು
Published 1 ಜನವರಿ 2020, 12:21 IST
Last Updated 1 ಜನವರಿ 2020, 12:21 IST
   
""
"ಬಿ.ಎಚ್.ರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿ"

ತುಮಕೂರು: ದ್ವಿದಳ ಧಾನ್ಯಗಳ ಇಳುವರಿಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿ ಇರುವ ಕರ್ನಾಟಕವು 2018–19ನೇ ಸಾಲಿನ ಕೇಂದ್ರ ಸರ್ಕಾರದ ಕೃಷಿ ಕರ್ಮಣ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕೇಂದ್ರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯವು ಎರಡನೇ ಬಾರಿಗೆ ಭಾಜನವಾಗಿದೆ. 2010–11ನೇ ಸಾಲಿನಲ್ಲಿ ಸಿರಿಧಾನ್ಯಗಳ ಇಳುವರಿಗಾಗಿ ಈ ಪ್ರಶಸ್ತಿ ರಾಜ್ಯಕ್ಕೆ ಸಂದಿತ್ತು.

ಸಚಿವಾಲಯದ ತಜ್ಞರ ತಂಡ ನಡೆಸಿದ ಸಮೀಕ್ಷೆಯಲ್ಲಿ ಬೆಳೆ ಇಳುವರಿ, ಉತ್ಪಾದನೆ ಹೆಚ್ಚಳಕ್ಕಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನ, ಕೃಷಿ ಉತ್ತೇಜನಕ್ಕೆ ಅಳವಡಿಸಿಕೊಂಡ ಸುಧಾರಿತ ಉಪಕ್ರಮಗಳನ್ನು ಪರಿಗಣಿಸಲಾಗಿದೆ.

ADVERTISEMENT

‘ಕರ್ನಾಟಕವು ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅವರೆ, ಅಲಸಂದೆ ಕಾಳುಗಳನ್ನು ಹೆಚ್ಚಾಗಿ ಉತ್ಪಾದಿಸುತ್ತ ದೇಶದ ಜನರ ಆಹಾರ ಭದ್ರತೆಗೆ ಕೊಡುಗೆ ನೀಡುತ್ತಿದೆ’ ಎಂದು ತಂಡವು ಸದಾಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ: ತುಮಕೂರಿನಲ್ಲಿ ಜ.2ರಂದು ನಡೆಯುವ ಬೃಹತ್‌ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯು ₹1 ಕೋಟಿ ಮತ್ತು ಪಾರಿತೋಷಕ ಒಳಗೊಂಡಿದೆ.

‘ಅದೃಷ್ಟಶಾಲಿ’ ರೈತರಿಗೆ ‘ಸಮ್ಮಾನ್‌ ನಿಧಿ’
‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’(ಪಿಎಂ–ಕಿಸಾನ್‌) ಯೋಜನೆಯ ಎರಡನೇ ವರ್ಷದ ಮೊದಲ ಕಂತನ್ನು ಪಡೆಯಲು ದೇಶದ 40 ‘ಅದೃಷ್ಟಶಾಲಿ’ ರೈತರನ್ನು ಕ್ರಮಸಂಖ್ಯೆಯ ಮೂಲಕ ಆಯ್ಕೆ ಮಾಡಲಾಗಿದೆ.

ಈ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು 40 ಕೋಟಿ ರೈತರಲ್ಲಿ 1 ಕೋಟಿ, 2 ಕೋಟಿ, 3 ಕೋಟಿ..... ಹೀಗೆ ಕೋಟಿಯ ಕ್ರಮಸಂಖ್ಯೆಯ ಅರ್ಜಿದಾರ ರೈತರನ್ನು ಸಮಾವೇಶದ ವೇದಿಕೆಗೆ ಕರಿಸಿ ಪ್ರಧಾನಿಯಿಂದ ಕಂತಿನ ಮೊತ್ತವನ್ನು ವಿತರಣೆ ಮಾಡಲಾಗುತ್ತಿದೆ.

ಅದೃಷ್ಟಶಾಲಿಗಳ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗೌಡಪ್ಪನಪಾಳ್ಯದ ಜಿ.ರಂಗಪ್ಪ ಮತ್ತು ತುರುವೇಕೆರೆ ತಾಲ್ಲೂಕಿನವೆಂಕಟಾಪುರದ ರೈತ ಮಹಲಿಂಗಣ್ಣ ಇದ್ದಾರೆ.

ಪ್ರಧಾನಿ ಕಾರ್ಯಕ್ರಮಕ್ಕೆ 1.50 ಲಕ್ಷ ಜನ: ಸಿಎಂ
ತುಮಕೂರು
: ಗುರುವಾರ (ಜ. 2) ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶಕ್ಕೆ 1.50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪ್ರಧಾನಿ ಭೇಟಿ ನೀಡಲಿರುವ ಸಿದ್ಧಗಂಗಾ ಮಠ, ಹೆಲಿಪ್ಯಾಡ್ ಹಾಗೂ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಧ್ವನಿವರ್ಧಕ, ಎಲ್‌ಇಡಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

*
ಕೃಷಿ ಸುಧಾರಣಾ ಯೋಜನೆಗಳು ಮತ್ತು ರಾಜ್ಯದ ರೈತರ ಶ್ರಮದಿಂದಾಗಿ ಪ್ರಶಸ್ತಿ ಸಂದಿದೆ. ಇದರಿಂದ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವ ಹುಮ್ಮಸ್ಸು ಬಂದಿದೆ.
-ಬಿ.ವೈ.ಶ್ರೀನಿವಾಸ್‌, ಕೃಷಿ ನಿರ್ದೇಶಕ, ರಾಜ್ಯ ಕೃಷಿ ನಿರ್ದೇಶನಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.