ADVERTISEMENT

ಕೃಷ್ಣ ಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಿಜೆಪಿ

21 ಎಕರೆ 16 ಗುಂಟೆಯಷ್ಟು ಕೆರೆ, ಸ್ಮಶಾನ ಜಮೀನು ದಾಖಲೆ ತಿರುಚಿ ಅಕ್ರಮ: ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:52 IST
Last Updated 17 ಡಿಸೆಂಬರ್ 2025, 15:52 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಸುವರ್ಣ ವಿಧಾನಸೌಧ (ಬೆಳಗಾವಿ) : ಕೋಲಾರ ಜಿಲ್ಲೆ ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದಲ್ಲಿ ಕೆರೆ ಮತ್ತು ಸ್ಮಶಾನ ಭೂಮಿಯ ದಾಖಲೆ ತಿದ್ದಿ ಖರಾಬು ಎಂದು ತಮ್ಮ ಹೆಸರಿಗೆ ಮಾಡಿಕೊಳ್ಳುವ ಮೂಲಕ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು. ಕೃಷ್ಣಬೈರೇಗೌಡ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಆರೋಪವೇನು?:

ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ 20 ಎಕರೆ 16 ಗುಂಟೆ (ಸರ್ವೇ ಸಂಖ್ಯೆ 46) ಜಮೀನು ಮೂಲ ದಾಖಲೆಯಲ್ಲಿ ಕೆರೆ ಎಂದು ನಮೂದಾಗಿದೆ. ಅದೇ ರೀತಿ ಸರ್ವೇ ಸಂಖ್ಯೆ 47 ರಲ್ಲಿ ಒಂದು ಎಕರೆ ಜಮೀನು ಮೂಲ ದಾಖಲೆಯ ಪ್ರಕಾರ ಸ್ಮಶಾನ ಎಂದು ನಮೂದಾಗಿದೆ.

ಆದರೆ, ಕೆರೆ ಮತ್ತು ಸ್ಮಶಾನಕ್ಕೆ ಸೇರಿದ ಒಟ್ಟು 21ಎಕರೆ 16 ಗುಂಟೆ ಜಮೀನಿನ ದಾಖಲೆಗಳನ್ನು ತಿದ್ದಿ, ಖರಾಬು ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. 2001–02ರಲ್ಲಿ ಈ ಕೃತ್ಯ ನಡೆದಿದೆ. ಕೃಷ್ಣಬೈರೇಗೌಡ ಮತ್ತು ಅವರ ಕುಟುಂಬದ ಹೆಸರಿಗೆ ಬರೆಸಲಾಗಿದೆ. ಈಗಲೂ ಕೃಷ್ಣಬೈರೇಗೌಡ ಅವರ ಕುಟುಂಬದ ಹೆಸರಿನಲ್ಲಿಯೇ ಇದೆ. ಕಂದಾಯ ಕಾನೂನಿನ ಪ್ರಕಾರ, ಸರ್ಕಾರಿ ಜಮೀನು ಅದರಲ್ಲೂ ಕರೆ, ಸ್ಮಶಾನದ ಜಮೀನುಗಳನ್ನು ಯಾವುದೇ ವ್ಯಕ್ತಿಯ ಹೆಸರಿಗೆ ದಾಖಲೆ ಮಾಡಲು ಸಾಧ್ಯವಿಲ್ಲ. ಈ ಜಮೀನಿನ ಮಾರುಕಟ್ಟೆ ಮೌಲ್ಯ ₹100 ಕೋಟಿ ಮೀರುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.

1978ರ ಮೂಲ ದಾಖಲೆಗಳಲ್ಲಿ ಕೆರೆ, ಸ್ಮಶಾನ ಎಂದೇ ಇದೆ. ಕೆರೆ ಮತ್ತು ಸ್ಮಶಾನ ಜಮೀನು ದಾಖಲೆಗಳನ್ನು ಬದಲಾವಣೆ ಮಾಡಲು ಯಾವ ಅಧಿಕಾರಿಗೂ ಅಧಿಕಾರವಿಲ್ಲ. ಸಚಿವರು ಅಧಿಕಾರ ದುರ್ಬಳಕೆ ಮಾಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.

‘ತಾವು ಪ್ರಾಮಾಣಿಕರು, ಶುದ್ಧಹಸ್ತರೆಂದು ಕೃಷ್ಣಬೈರೇಗೌಡ ಬಿಂಬಿಸಿಕೊಳ್ಳುತ್ತಾರೆ. ದಾಖಲೆಗಳನ್ನು ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಇದು ‘ಬೇಲಿಯೇ ಎದ್ದು ಹೊಲ ಮೇಯ್ದ’ ಪ್ರಕರಣ. ಮುಖ್ಯಮಂತ್ರಿ ಈ ಭೂಹಗರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಒಂದು ವೇಳೆ ಸರ್ಕಾರ ಈ ಕುರಿತು ಮೃದು ಧೋರಣೆ ತಾಳಿದರೆ ಕಾನೂನು ಹೋರಾಟದ ಜತೆಗೆ ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತೇವೆ’ ಎನ್‌.ರವಿ ಕುಮಾರ್ ಎಚ್ಚರಿಸಿದರು.

‘ಈ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪತ್ನಿ 14 ನಿವೇಶನಗಳನ್ನು ವಾಪಸ್‌ ಮಾಡಿದ್ದರು. ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ 5 ಎಕರೆ ಜಮೀನನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಕುಟುಂಬದ ಒಡೆತನದ ಟ್ರಸ್ಟ್‌ಗೆ ಮಂಜೂರು ಮಾಡಿಸಿಕೊಂಡಿದ್ದರು. ಬಳಿಕ ಅದನ್ನು ಹಿಂತಿರುಗಿಸಿದರು. ಇದೀಗ ಮತ್ತೊಂದು ಹಗರಣ ಬಯಲಿದೆ ಬಂದಿದೆ ಎಂದು ಅವರು ಹೇಳಿದರು.

‘ಪಿತ್ರಾರ್ಜಿತ ಆಸ್ತಿ: ತೀಟೆಗಾಗಿ ಆರೋಪ’

‘ರಾಜಕೀಯ ತೀಟೆಗಾಗಿ ವಿರೋಧ ಪಕ್ಷದ ನಾಯಕರು ನನ್ನ ಮೇಲೆ ಭೂ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪದ ಕುರಿತು ಲೋಕಾಯುಕ್ತ ಸೇರಿದಂತೆ ಯಾವುದೇ ತನಿಖೆಗೂ ಸಿದ್ಧ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ‘ಆರೋಪ ಮಾಡಬೇಕು ಎಂಬ ಕಾರಣಕ್ಕೆ ಯಾವುದೇ ವಿಚಾರ ಇಲ್ಲದಿದ್ದರೂ ಹುಡುಕಿ ಆರೋಪ ಮಾಡಲಾಗುತ್ತಿದೆ. ಗರುಡನಪಾಳ್ಯದ ಭೂಮಿ ನನ್ನ ತಾತ ಅವರಿಂದ ಬಂದ ಪಿತ್ರಾರ್ಜಿತ ಆಸ್ತಿ. ನಮ್ಮ ತಂದೆಯ ಮೂಲಕ ಭಾಗವಾಗಿ ನಮಗೆ ಬಂದಿದೆ. ಬೇಕಾದರೂ ಅದನ್ನು ಯಾವ ಮೂಲದಿಂದಲಾದರೂ ಪರಿಶೀಲಿಸಿಕೊಳ್ಳಲಿ. ಯಾವ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಪರೀಕ್ಷಿಸಲಿ’ ಎಂದರು.

‘ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇಲಾಖಾ ಅಥವಾ ಸರ್ಕಾರದ ತನಿಖೆ ನಡೆದರೆ ಪಕ್ಷಪಾತವಾಗುತ್ತದೆ ಎಂದಾದರೆ ಯಾವುದಾದರೂ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಲಿ. ಲೋಕಾಯುಕ್ತಕ್ಕೆ ನ್ಯಾಯಾಲಯಕ್ಕೆ ದೂರು ನೀಡಿ ತನಿಖೆ ಮಾಡಿಸಲಿ. ಈ ವಿಚಾರದಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆ ನಾನು ತಲೆಬಾಗುತ್ತೇನೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೆಸರೆರಚಾಟ ಮಾಡುವುದು ಸರಿಯಲ್ಲ. ಇಲ್ಲಸಲ್ಲದ ಆರೋಪ ಮಾಡುವುದನ್ನೇ ವೃತ್ತಿಯಾಗಿಸಿಕೊಂಡವರಷ್ಟೇ ಈ ರೀತಿ ಮಾಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.