ಮೈಸೂರು: ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಹೆಚ್ಚಿನ ನೀರಿನ ಸಂಗ್ರಹವಿದ್ದು ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ಬರ ಎದುರಾಗದು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 102 ಅಡಿಗಳಷ್ಟಿದೆ. 45.05 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 20.02 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.30 ಟಿಎಂಸಿ ಅಡಿಗೆ ಕುಸಿದಿತ್ತು.
ಬೆಂಗಳೂರು, ಮೈಸೂರು ನಗರ ಸೇರಿದಂತೆ ಇತರ 47 ಪಟ್ಟಣಗಳು, 625 ಗ್ರಾಮಗಳ ಜನರು ದಿನಬಳಕೆ ಮತ್ತು ಕುಡಿಯುವ ನೀರಿಗೆ ಕೆಆರ್ಎಸ್ ಜಲಾಶಯ ಅವಲಂಬಿಸಿದ್ದಾರೆ.
ಕೆಆರ್ಎಸ್ನಲ್ಲಿ ಹೆಚ್ಚಿನ ನೀರು ಇರುವುದರಿಂದ ಕುಡಿಯುವ ನೀರಿನ ಕೊರತೆ ಎದುರಾಗದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಇತರ ಪಟ್ಟಣಗಳ ನೀರಿನ ಅವಶ್ಯಕತೆ ಪೂರೈಸಲು ಪ್ರತಿ ತಿಂಗಳು ಮೂರು ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮುಂದಿನ ಮೂರು ತಿಂಗಳಿಗೆ 9 ಟಿಎಂಸಿ ಅಡಿ ನೀರು ಬೇಕು. ಈಗ ಇರುವ ನೀರನ್ನು ಇತರ ಚಟುವಟಿಕೆಗಳಿಗೆ ಬಳಸದೇ ಇದ್ದರೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದು ಎಂದು ಹೇಳಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಬಿಡುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈ ಎರಡನೇ ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು.
ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ನೀರಿನ ಸಂಗ್ರಹ ಇದೆ. 15.67 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 8.35 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.45 ಟಿಎಂಸಿ ಅಡಿ ನೀರು ಇತ್ತು.
ಹಾಸನ ಮತ್ತು ಕೊಡಗಿನಲ್ಲಿ ಈ ಸಲ ಹೆಚ್ಚು ಮಳೆಯಾಗಿದ್ದರೂ ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.