ADVERTISEMENT

ಸಿದ್ದರಾಮಯ್ಯಗೆ ಡಿ.9ರಂದು ಹುಚ್ಚು ಬಿಡಲಿದೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:52 IST
Last Updated 1 ಡಿಸೆಂಬರ್ 2019, 14:52 IST
   

ಅಥಣಿ (ಬೆಳಗಾವಿ ಜಿಲ್ಲೆ): ‘ಮುಖ್ಯಮಂತ್ರಿಯಾಗುತ್ತೇನೆ ಎಂದು ಹುಚ್ಚು ಕನಸು ಕಾಣುತ್ತಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿಡಿದಿರುವ ಹುಚ್ಚು ಡಿ. 9ರಂದು ಬಿಡಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ದೇಸಾರಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಪರ ಭಾನುವಾರ ಪ್ರಚಾರ ನಡೆಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಇನ್ನೆಂದೂ ಮುಖ್ಯಮಂತ್ರಿ ಆಗುವುದಿಲ್ಲ. ವಿರೋಧಪಕ್ಷದ ನಾಯಕನ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ’ ಎಂದರು.

ADVERTISEMENT

‘ಉಪ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಧ್ರುವೀಕರಣ ಆಗುತ್ತದೆ ಎನ್ನುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರು 15ರಲ್ಲಿ ಒಂದು ಕ್ಷೇತ್ರವನ್ನಾದ್ರೂ ಗೆಲ್ತಾರಾ ನೋಡಿಕೊಳ್ಳಲಿ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಚಲಾವಣೆ ಇಲ್ಲದ ನಾಣ್ಯಗಳು. ಮಲ್ಲಿಕಾರ್ಜುನ ಖರ್ಗೆ ಸೋತು ಮನೆಯಲ್ಲಿದ್ದಾರೆ. ಅವರನ್ನೆಲ್ಲಿ ಮುಖ್ಯಮಂತ್ರಿ ಮಾಡುತ್ತಾರೆ? ಜೆಡಿಎಸ್ ಸ್ಥಿತಿ ನೆನೆದರೆ ಅಯ್ಯೋ ಅನ್ನಿಸುತ್ತದೆ. ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ತಂದೆ ಎಚ್‌.ಡಿ. ದೇವೇಗೌಡರನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಅನರ್ಹರನ್ನು ಸೋಲಿಸ್ತಾರಂತೆ!’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.