ADVERTISEMENT

ಸಾರಿಗೆ ನಿಗಮಗಳಲ್ಲಿ ಕೊಳ್ಳೆ ಹೊಡೆದು ಸಿಕ್ಕಿಬಿದ್ದರು

ಮನೋಜ ಕುಮಾರ್ ಗುದ್ದಿ
Published 21 ಜುಲೈ 2019, 2:16 IST
Last Updated 21 ಜುಲೈ 2019, 2:16 IST
   

ಕಲಬುರ್ಗಿ: ವರ್ಷದ ಹಿಂದೆ ಬಸ್‌ ನಿರ್ವಾಹಕರು ಟಿಕೆಟ್‌ ಮಾರಾಟದಿಂದ ಬಂದ ಹಣವನ್ನು ತಂದು ಲೆಕ್ಕ ವಿಭಾಗದಲ್ಲಿ ಕಟ್ಟಿದ್ದು, ನಿಗಮಕ್ಕೆ ಸಂದಾಯವಾಗಲೇ ಇಲ್ಲ. ಏಕೆ ಎಂದು ಸಂಶಯ ಬಂದು ನೋಡಿದರೆ ಗುಮಾಸ್ತರು ಹಿಂದಿನ ದಿನಾಂಕವನ್ನು ನಮೂದಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದು ಸಿಕ್ಕಿ ಬಿದ್ದ ಪ್ರಕರಣಗಳು ಬೆಳಕಿಗೆ ಬಂದವು.

ಬೆಳಕಿಗೆ ಬಾರದ ಎಷ್ಟೋ ಪ್ರಕರಣಗಳು ಇವೆ ಎಂಬುದು ನಿಗಮದ ಕಾರ್ಯವೈಖರಿಯನ್ನು ಬಲ್ಲ ಕಾರ್ಮಿಕ ಸಂಘಟನೆಯ ಮುಖಂಡರು ಹೇಳುವ ಮಾತು.

ಬೀದರ್‌ ವಿಭಾಗದ ಡಿಪೊ 1ರಲ್ಲಿ ₹59 ಲಕ್ಷ ಹಣವನ್ನು ಇದೇ ರೀತಿ ಸುಳ್ಳು ಲೆಕ್ಕ ತೋರಿಸಿ ವಂಚಿಸಲಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ಸಾರಿಗೆ ಡಿಪೊದಲ್ಲಿಯೂ ಸುಮಾರು ₹ 31 ಲಕ್ಷದಷ್ಟು ಹಣವನ್ನು ಇದೇ ರೀತಿ ಹಳೆ ದಿನಾಂಕ ಹಾಕಿ ಲಪಟಾಯಿಸಲಾಗಿತ್ತು. ಈ ಬಗ್ಗೆ ನಿಗಮದ ಜಾಗೃತ ಶಾಖೆಯವರು ತನಿಖೆ ನಡೆಸಿ ಅಷ್ಟೂ ಹಣವನ್ನು ವಸೂಲಿ ಮಾಡಿದ್ದಾರೆ. ಸಣ್ಣ ಪುಟ್ಟ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಎಷ್ಟೋ ಬಾರಿ ಡಿಪೊ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ಬರದಂತೆಯೇ ಭ್ರಷ್ಟಾಚಾರದ ಪ್ರಕರಣಗಳು ನಡೆದ ಉದಾಹರಣೆಗಳೂ ಇವೆ.

‘ಸ್ಥಳೀಯವಾಗಿ ಖಾಸಗಿ ಜೀಪ್‌, ಟಂಟಂನವರೊಂದಿಗೆ ಒಳಒಪ್ಪಂದ ಮಾಡಿಕೊಂಡ ಸಾರಿಗೆ ಸಂಸ್ಥೆಯ ಚಾಲಕರು, ಖಾಸಗಿ ವಾಹನಗಳು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಲು ಬಿಟ್ಟು ಹಿಂದೆ ಖಾಲಿ ಬಸ್‌ಗಳನ್ನು ಚಲಾಯಿಸಿಕೊಂಡು ಹೋಗುವ ಬಗ್ಗೆಯೂ ವರ್ಷಗಳ ಹಿಂದೆ ಆಕ್ಷೇಪಗಳು ಕೇಳಿ ಬಂದಿದ್ದವು. ನಮ್ಮ ಸಿಬ್ಬಂದಿ ಜೊತೆಗೆ ಆರ್‌ಟಿಒ ಅಧಿಕಾರಿಗಳ ‘ಆಶೀರ್ವಾದ’ ಖಾಸಗಿ ವಾಹನಗಳವರಿಗೆ ಇದ್ದೇ ಇರುತ್ತದೆ’ ಎಂಬುದು ಸಾರಿಗೆ ನಿಗಮದ ಅಧಿಕಾರಿಯೊಬ್ಬರ ಅಭಿಪ್ರಾಯ.

‘ಕಲಬುರ್ಗಿ ನಗರದಿಂದಲೇ ನಿತ್ಯ 63 ಖಾಸಗಿ ಬಸ್‌ಗಳು ಪ್ರಮುಖ ರೂಟ್‌ಗಳಾದ ಬೆಂಗಳೂರು, ಪುಣೆ ಹಾಗೂ ಮುಂಬೈಗೆ ತೆರಳುತ್ತವೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಹಲವು ಬಾರಿ ದಾಖಲೆ ಸಮೇತ ಮಾಹಿತಿ ನೀಡಿದ್ದರೂ ಪರಿಣಾಮ ಶೂನ್ಯವೇ ಆಗಿದೆ. ಆ ಬಸ್‌ಗಳಿಗೆ ಸ್ಟೇಜ್‌ ಕ್ಯಾರೇಜ್‌ಗೆ (ಪ್ರತಿಯೊಂದು ಊರುಗಳಲ್ಲಿ ನಿಲ್ಲಿಸುವುದು) ಅನುಮತಿ ಇಲ್ಲ. ಆದರೂ, ನಿಯಮ ಉಲ್ಲಂಘಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ’ ಎಂದು ಅಧಿಕಾರಿ ದಾಖಲೆ ಸಮೇತ ವಿವರ ನೀಡಿದರು.

*
ಸರ್ಕಾರ ತನ್ನ ಪಾಲಿನ ಹಣ ಒದಗಿಸಬೇಕು. ಜೊತೆಗೆ ಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಿದರೆ ಲಾಭದ ಹಾದಿಗೆ ಮರಳಬಹುದು
-ಎಸ್.ಎಂ.ಶರ್ಮಾ‌, ಜಿಲ್ಲಾ ಕಾರ್ಯದರ್ಶಿ, ಎಐಯುಟಿಯುಸಿ ಕಾರ್ಮಿಕ ಸಂಘಟನೆ, ಕಲಬುರ್ಗಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.