ADVERTISEMENT

ಕರೆಯೋದಲ್ಲ, ಹೋರಾಟಕ್ಕೆ ಬಂದು ಸೇರಬೇಕು; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:30 IST
Last Updated 16 ಡಿಸೆಂಬರ್ 2020, 19:30 IST
ಕೆ.ಎಸ್‌. ಈಶ್ವರಪ್ಪ 
ಕೆ.ಎಸ್‌. ಈಶ್ವರಪ್ಪ    

ಬೆಂಗಳೂರು: ‘ಕುರುಬರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯಡಿ ರಾಜ್ಯದಾದ್ಯಂತ ಆಂದೋಲನ ನಡೆಯುತ್ತಿದೆ. ಹೋರಾಟಕ್ಕೆ ಯಾರೂ ಕರೆಯೋದಲ್ಲ, ಬಂದು ಸೇರಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್‌. ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕುರುಬರ ಎಸ್‌.ಟಿ. ಹೋರಾಟ ಸಮಿತಿ ವತಿಯಿಂದ ನಡೆಯಲಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶದ ಪೂರ್ವಭಾವಿಯಾಗಿ ಬುಧವಾರ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಸ್‌.ಟಿ. ಬೇಡಿಕೆಯ ಹೋರಾಟಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಜಾತ್ರೆ ರೂಪದಲ್ಲಿ ನಮ್ಮ ಆಂದೋಲನ ನಡೆಯುತ್ತಿದೆ. ಕೆಲವರು ಇನ್ನೂ ನಮ್ಮನ್ನು ಕರೆದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇದು ಕರೆಯಬೇಕಾದ ಕೆಲಸ ಅಲ್ಲ. ಅವರೇ ಬಂದು ಸೇರಬೇಕು’ ಎಂದರು.

ADVERTISEMENT

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಾಗಿದೆ. ಸುಮ್ಮನೆ ಕುಳಿತರೆ ಪರಿಶಿಷ್ಟ ಪಂಗಡಗಳ ಮೀಸಲಾತಿ ದೊರೆಯುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ಬರುವ ರೀತಿಯಲ್ಲಿ ಹೋರಾಟ ನಡೆಸಬೇಕು. ಕೇಂದ್ರ ಸರ್ಕಾರದ ಒಲವು ಗಳಿಸಿಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದರು.

‘ಕೆಲವರು ಏಕೆ ಹೋರಾಟಕ್ಕೆ ಬಂದಿಲ್ಲ ಎಂಬುದನ್ನು ನೋಡಲು ಹೋಗಬಾರದು. ಚರ್ಚೆ ಮಾಡುತ್ತಾ ಕುಳಿತರೆ ಪ್ರಯೋಜನ ಆಗುವುದಿಲ್ಲ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿ ಮೀಸಲಾತಿ ಪಡೆಯುವುದು ನಮ್ಮ ಉದ್ದೇಶ. ಅದಕ್ಕಾಗಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮುಂದುವರಿಸಬೇಕು’ ಎಂದರು.

ಮಾಜಿ ಸಚಿವ ಎಚ್‌.ಎಂ. ರೇವಣ್ಣ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಹುಲಿ ನಾಯ್ಕರ್‌, ಕುರುಬರ ಎಸ್‌.ಟಿ. ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್‌ ಮೂರ್ತಿ, ಮಾಜಿ ಮೇಯರ್‌ ಜೆ. ಹುಚ್ಚಪ್ಪ, ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ನಾಗರಾಜ್‌ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.