ADVERTISEMENT

ವಿಧಾನ ಪರಿಷತ್: ವಿರೋಧದ ಮಧ್ಯೆ ಕೆರೆ ಸಂರಕ್ಷಣೆ ಮಸೂದೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:21 IST
Last Updated 20 ಆಗಸ್ಟ್ 2025, 16:21 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕೆರೆಗಳ ಬಫರ್‌ ಝೋನ್‌ ಕಡಿಮೆ ಮಾಡಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ’ಯನ್ನು ವಿರೋಧ ಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆಯೇ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.

ಸಭಾ ನಾಯಕ ಎನ್‌.ಎಸ್‌.ಬೋಸರಾಜು ಅವರು ಮಸೂದೆಯನ್ನು ಮಂಡಿಸಿದರು. ‘ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಣ್ಣ ಜಲಮೂಲಗಳ ಸಂರಕ್ಷಣೆಯ ಜತೆಗೆ ಅಭಿವೃದ್ಧಿ ಚಟುವಟಿಕೆಗಳನ್ನೂ ನಡೆಸಲು ಬಫರ್‌ ಝೋನ್‌ ಅನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯವಿತ್ತು’ ಎಂದರು.

ADVERTISEMENT

ಬೆಂಗಳೂರು ವ್ಯಾಪ್ತಿಯ ಕೆರೆಗಳ ಬಫರ್‌ ಝೋನ್ ಕಡಿಮೆ ಮಾಡುವುದಕ್ಕೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ತಿದ್ದುಪಡಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಅನುಕೂಲವಾಗುತ್ತದೆ. ಕೆರೆಗಳು ಹಾಳಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು. ಸಚಿವ ಬೋಸರಾಜು ಅವರು ನೀಡಿದ ಉತ್ತರಗಳಿಗೆ ತೃಪ್ತರಾಗದ ಸದಸ್ಯರು, ‘ಬೆಂಗಳೂರಿನ ಕೆರೆಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ವಾಪಸ್‌ ಪಡೆಯಬೇಕು. ಇಲ್ಲವೇ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.

ಈ ಮಧ್ಯೆಯೇ ಬೋಸರಾಜು ಅವರು ಮಸೂದೆಯನ್ನು ಅಂಗೀಕರಿಸುವಂತೆ ಕೋರಿದರು. ಆಗ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಆರೋಗ್ಯ ಸಿಬ್ಬಂದಿಗೆ ಕೌನ್ಸೆಲಿಂಗ್‌ ಮೂಲಕವಷ್ಟೇ ವರ್ಗಾವಣೆ

ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ವಿಧಾನಪರಿಷತ್ ಅಂಗೀಕರಿಸಿತು. ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕೌನ್ಸೆಲಿಂಗ್‌ ಮೂಲಕ ಮಾತ್ರ ವರ್ಗಾವಣೆ ಮಾಡಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.

ಬೆಂಗಳೂರು ನಗರದಲ್ಲಿ ದೀರ್ಘಾವಧಿ ಸೇವೆಯಲ್ಲಿ ಇರುವವರನ್ನು ಹೊರಜಿಲ್ಲೆಗಳಿಗೆ, ತಜ್ಞ ವೈದ್ಯರನ್ನು ತಜ್ಞರ ಹುದ್ದೆಗಳಿಗಷ್ಟೇ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡುವ ಅಂಶಗಳು ಮಸೂದೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.