ADVERTISEMENT

ಮುಖ್ಯಮಂತ್ರಿ ಹೇಳಿಕೆ ವಾಪಸ್ ಪಡೆಯಲಿ: ಮಹಿಳಾ ಸಂಘಟನೆಗಳ ಒಕ್ಕೂಟ

ಮಹಿಳಾ ಸಂಘಟನೆಗಳ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 17:28 IST
Last Updated 18 ಅಕ್ಟೋಬರ್ 2021, 17:28 IST

ಬೆಂಗಳೂರು: ‘ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಗೂಂಡಾಗಿರಿ, ದೌರ್ಜನ್ಯಗಳ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ನೀಡಿದ ಪ್ರತಿಕ್ರಿಯೆ ಖಂಡನೀಯ. ಅದನ್ನು ಕೂಡಲೇ ವಾಪಸ್‌ ಪಡೆಯಬೇಕು’ ಎಂದು ಮಹಿಳಾ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ’ ಆಗ್ರಹಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ‘ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡಬೇಕೇ ಹೊರತು, ಆರ್‌ಎಸ್‌ಎಸ್‌ ಮುಖವಾಣಿಯಾಗಿ ಅಲ್ಲ. ಅವರು ಕೂಡಲೇ ಆ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನ ಪ್ರತಿಯೊಬ್ಬರಿಗೂ ಪ್ರೀತಿಸುವ ಹಾಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಆದರೆ, ಹಿಂದೂ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಬೆಳಗಾವಿಯಲ್ಲಿಅರ್ಬಾಜ್ ಮುಲ್ಲಾ ಎಂಬ ಯುವಕನನ್ನುಹಿಂದು ಸಂಘಟನೆಯವರು ಅಪಹರಿಸಿ, ದೇಹದ ಭಾಗಗಳನ್ನು ಕತ್ತರಿಸಿ ಎಸೆದಿದ್ದಾರೆ ಎಂದು ವರದಿಯಾಗಿದೆ. ಇದು ಸಮಾಜ ತಲೆ ತಗ್ಗಿಸುವ ಘಟನೆಯಾಗಿದ್ದು, ಮೃತನತಾಯಿಗೆ ಸೂಕ್ತ ಭದ್ರತೆ ಮತ್ತು ಪರಿಹಾರ ಸಿಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬೆಳಗಾವಿ ಪ್ರಕರಣದ ತನಿಖೆ ಹಾದಿ ತಪ್ಪದಂತೆ ಎಚ್ಚರಿಕೆ ವಹಿಸಬೇಕು. ಧರ್ಮಗಳ ನಡುವೆ ವಿಷದ ಬೀಜವನ್ನು ಬಿತ್ತುತ್ತಿರುವ ಧರ್ಮಾಂಧ, ಬಲಪಂಥೀಯ, ಮನುಷ್ಯ ವಿರೋಧಿ ಗುಂಪುಗಳನ್ನು ನಿಯಂತ್ರಣಕ್ಕೆ ತರಬೇಕು. ಯುವಜನರ ಮತ್ತು ಎಲ್ಲ ಧರ್ಮೀಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು’ ಎಂದೂ ಹೇಳಿದರು.

ಅಕ್ಕೈ ಪದ್ಮಶಾಲಿ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.