ADVERTISEMENT

ಒಕ್ಕಲಿಗರ ಮೀಸಲಾತಿ ಬಗ್ಗೆ ಸರ್ಕಾರ ನಿಲುವು ಪ್ರಕಟಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 19:11 IST
Last Updated 22 ಜನವರಿ 2023, 19:11 IST
ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿಗೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಪುಷ್ಪಾರ್ಚನೆ ಮಾಡಿದರು. ಸಂಜೀವ ಮಠಂದೂರು, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದಗೌಡ, ಡಾ.ಧರ್ಮಪಾಲನಾಥ ಸ್ವಾಮೀಜಿ ಇದ್ದಾರೆ  – ಪ್ರಜಾವಾಣಿ ಚಿತ್ರ
ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿಗೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಪುಷ್ಪಾರ್ಚನೆ ಮಾಡಿದರು. ಸಂಜೀವ ಮಠಂದೂರು, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದಗೌಡ, ಡಾ.ಧರ್ಮಪಾಲನಾಥ ಸ್ವಾಮೀಜಿ ಇದ್ದಾರೆ  – ಪ್ರಜಾವಾಣಿ ಚಿತ್ರ   

ಪುತ್ತೂರು (ದಕ್ಷಿಣ ಕನ್ನಡ): ‘ಒಕ್ಕಲಿಗರ ಮೀಸಲಾತಿಗೆ ಸಂಬಂಧಿಸಿ ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಆದಷ್ಟು ಬೇಗ ಪ್ರಕಟಿಸಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತಿ ಮತ್ತು ನಿರ್ಮಲಾನಂದನಾಥ ಶ್ರೀಗಳ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ‌ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಆವರಣ ದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

‘ಒಕ್ಕಲಿಗರಿಗೂ ಮೀಸಲಾತಿ ಸಿಗುತ್ತಿದೆ. ಆದರೆ ಶೇ 4ರಷ್ಟು ಮಾತ್ರ. ಈ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಆದರೆ, ಸ್ಪಷ್ಟವಾದ ಉತ್ತರ ಇನ್ನೂ ಸಿಗಲಿಲ್ಲ. ಸರ್ಕಾರದ ಮೇಲೆ ಭರವಸೆ ಮತ್ತು ನಿರೀಕ್ಷೆ ಇರುವುರಿಂದ ಸದ್ಯಕ್ಕೆ ಹೋರಾಟದ ಬಗ್ಗೆ ಯೋಚನೆ ಮಾಡಲಿಲ್ಲ’ ಎಂದು ಹೇಳಿದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಜನಸಂಖ್ಯೆ ಆಧಾರದ ಮೇಲೆ ಶೇಕಡ 12ರಷ್ಟು ಮೀಸಲಾತಿ ಕೇಳುತ್ತಿದ್ದೇವೆ. ಇದರಲ್ಲಿ ಬೇರೆ ಸಮುದಾಯದವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ’ ಎಂದರು.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಸಿ. ಅಶ್ವತ್ಥನಾರಾಯಣ, ಸಂಸದ ಡಿ.ವಿ. ಸದಾನಂದಗೌಡ, ರಾಜ್ಯಸಭಾ ಜಗ್ಗೇಶ್‌, ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌. ಭೋಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಕೆ.ವಿ.ರೇಣುಕಾ ಪ್ರಸಾದ್, ರಾಜ್ಯ
ಒಕ್ಕಲಿಗ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಮಾಜಿ ಸಚಿವ ಗಂಗಾಧರ ಗೌಡ ಇದ್ದರು.

ಮಂಗಳವಾದ್ಯಗಳ ಹಿಮ್ಮೇಳ ಮತ್ತು ಮಂಗಳ ದ್ರವ್ಯ, ಹೂಗಳ ಸೊಬಗಿನಲ್ಲಿ ನಿರ್ಮಲಾನಂದನಾಥರ
ರಜತ ತುಲಾಭಾರ ನಡೆಯಿತು. ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಪೀಠಾಧ್ಯಕ್ಷ ಡಾ. ಧರ್ಮಪಾಲನಾಥ ಸ್ಜಾಮೀಜಿ ಅವರ ಸಂಶೋಧನಾ ಪ್ರಬಂಧ ‘ಸಂಸ್ಕೃತ- ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ, ಒಂದು ಅಧ್ಯಯನ’ ಬಿಡುಗಡೆ ಮಾಡಲಾಯಿತು. ಕೃತಿಯ ಬಗ್ಗೆ ಪ್ರಾಧ್ಯಾಪಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.