ADVERTISEMENT

‘ಸ್ವದೇಶಿ, ಸ್ವಭಾಷಾ, ಸ್ವಭೂಷಾ ಸೂತ್ರ’: ಬಿ.ಎಲ್. ಸಂತೋಷ್‌

ಸೇವೆಯೇ ಸಂಘಟನೆಯಾಗಲಿ– ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕರೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 18:17 IST
Last Updated 6 ಜುಲೈ 2020, 18:17 IST
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್   

ಬೆಂಗಳೂರು: ‘ಆತ್ಮನಿರ್ಭರ ಭಾರತ್ ಯಜ್ಞ‌ ಯಶಸ್ವಿ ಆಗಬೇಕಾದರೆ ಸ್ವದೇಶಿ, ಸ್ವಭಾಷಾ, ಸ್ವಭೂಷಾ ಈ ಮೂರು ಸೂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಸಲಹೆ ನೀಡಿದರು.

ದೆಹಲಿಯಿಂದ ವಿಡಿಯೊ ಸಂವಾದ ಮೂಲಕ ‘ಕರ್ನಾಟಕ ಜನಸಂವಾದ’ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಅವರು, ‘ದೇಸೀ ಉತ್ಪನ್ನಗಳನ್ನೇ ಬಳಸೋಣ. ಸ್ಥಳೀಯ ಭಾಷೆಯನ್ನೇ ಬಳಸಿ, ವ್ಯವಹರಿಸೋಣ. ನಮ್ಮದೇ ವೇಷ, ಭೂಷಣ, ಸಂಸ್ಕೃತಿ ನಮ್ಮ ಸಂಕಲ್ಪವಾಗಲಿ’ ಎಂದು ಮನವಿ ಮಾಡಿದರು.

‘ಚೀನಾ ಗಡಿಗೆ ತೆರಳಿದ ಪ್ರಧಾನಿ ಮೋದಿ, ಸೈನಿಕರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದರು. ಆದರೆ, ಆರು ವರ್ಷಗಳಲ್ಲಿ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯ 11 ಸಭೆಗಳ ಪೈಕಿ, ಸಮಿತಿಯ ಸದಸ್ಯರಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ಅಂಥವರಿಗೆ ಮೋದಿ ನಡೆಯನ್ನು ಟೀಕಿಸುವ ನೈತಿಕತೆ ಎಲ್ಲಿದೆ’ ಎಂದು ಸಂತೋಷ್‌ ಪ್ರಶ್ನಿಸಿದರು.

ADVERTISEMENT

‘ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದಾಗ, ಸಾವರ್ಕರ್‌ ಯಾರು ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದರು. ವ್ಯಕ್ತಿ ವಿದೇಶಿ, ಪಕ್ಷ ವಿದೇಶಿ, ಅರ್ಧ ಜನ ವಿದೇಶಿ ಅಂಥವರು ಮಾತ್ರ ಸಾವರ್ಕರ್ ಯಾರು ಎಂದು ಕೇಳಲು ಸಾಧ್ಯ. ಹೀಗೆ ಪ್ರಶ್ನಿಸಿದವರು ಭವಿಷ್ಯದಲ್ಲಿ ಕಸದ ಬುಟ್ಟಿ ಸೇರುತ್ತಾರೆ’ ಎಂದರು.

ಬಿಎಸ್‌ವೈ ಕೆಲಸಕ್ಕೆ ಶ್ಲಾಘನೆ

‘ಸೇವೆಯೇ ಸಂಘಟನೆ ಎಂಬ ಧ್ಯೇಯ ನಮ್ಮದಾಗಲಿ’ ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ ಸಂತೋಷ್‌, ಕೊರೊನಾ ನಿಯಂತ್ರಿಸಲು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೆಗೆದುಕೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.