ಬೆಂಗಳೂರು: ವಿಧಾನಪರಿಷತ್ ಸಭಾ ಸಂಪ್ರದಾಯವನ್ನು ಉಲ್ಲಂಘಿಸಿ ಸಭಾಪತಿ ಪೀಠದಲ್ಲಿ ಆಸೀನರಾದ ಉಪಸಭಾಪತಿ ಧರ್ಮೇಗೌಡ, ಅವರು ಪೀಠದಲ್ಲಿ ಕೂರಲು ಪ್ರಚೋದಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಭಾಪತಿಯವರಿಗೆ ಕಾಂಗ್ರೆಸ್ ದೂರು ನೀಡಿದೆ.
ಡಿ.15 ರಂದು ಪರಿಷತ್ತಿನಲ್ಲಿ ನಡೆದ ಘಟನಾವಳಿಗಳಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ನ ಪಿ.ಆರ್. ರಮೇಶ್ ಅವರು ಪತ್ರ ಬರೆದಿದ್ದಾರೆ.
ಸಭಾಪತಿ ಸದನದೊಳಗೆ ಪ್ರವೇಶಿಸಲು ಅಡ್ಡಿಪಡಿಸುವ ಉದ್ದೇಶದಿಂದ ಕಾನೂನು ಕೈಗೆತ್ತಿಕೊಂಡು ಸಭಾಪತಿ ಪ್ರವೇಶದ ಬಾಗಿಲನ್ನು ಮುಚ್ಚಿ ಬಲ ಪ್ರಯೋಗಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಾಪುರ, ಪ್ರಾಣೇಶ್ ಅವರನ್ನು ಸದಸ್ಯತ್ವದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಭಾಪತಿ ಪೀಠದ ಬಳಿ ಗುಂಪುಗೂಡಿ ಬಲ ಪ್ರಯೋಗ ಮಾಡಿದ ಬಿಜೆಪಿಯ ಆಯನೂರು ಮಂಜುನಾಥ್, ಎನ್. ರವಿಕುಮಾರ್, ತೇಜಸ್ವಿನಿ ಗೌಡ, ಪುಟ್ಟಣ್ಣ, ಸುನಿಲ್ ವಲ್ಯಾಪುರೆ, ಜೆಡಿಎಸ್ನ ಗೋವಿಂದರಾಜು, ರಮೇಶ್ ಗೌಡ, ಶ್ರೀಕಂಠೇಗೌಡ ಅವರು ಅಸಂಸದೀಯ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.
ಉಪಸಭಾಪತಿ ಸಭಾಪತಿ ಪೀಠದಲ್ಲಿ ಆಸೀನರಾಗುವುದನ್ನು ತಡೆಯದೇ ಇದ್ದ ಕಾರಣ ಮತ್ತು ಮಾರ್ಷಲ್ಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದ ಕಾರಣ, ಇವರೆಲ್ಲರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.