ADVERTISEMENT

ಕಾಂಗ್ರೆಸ್‌ ಮುಖಂಡ ಬಸವರಾಜ್‌ಗೆ ಜೀವ ಬೆದರಿಕೆ

ಸಾವರ್ಕರ್‌ ವಿರುದ್ಧದ ಹೇಳಿಕೆಗೆ ಕ್ಷಮೆಯಾಚಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:31 IST
Last Updated 23 ಡಿಸೆಂಬರ್ 2019, 19:31 IST
ಡಿ. ಬಸವರಾಜ್‌
ಡಿ. ಬಸವರಾಜ್‌   

ದಾವಣಗೆರೆ: ವೀರ್‌ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕು ಎಂಬ ಮಹಾರಾಷ್ಟ್ರ ಬಿಜೆಪಿ ಘಟಕದ ಪ್ರಸ್ತಾವವನ್ನು ಖಂಡಿಸಿದ್ದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್‌ ಅವರ ಮೊಬೈಲ್‌ಗೆ ಸೋಮವಾರ ಕರೆ ಮಾಡಿದ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕು ಎಂಬ ಪ್ರಸ್ತಾವ ಮಂಡಿಸಲಾಗಿತ್ತು. ಇದು ಮಹಾತ್ಮ ಗಾಂಧಿಗೆ ಮಾಡುವ ಅವಮಾನ ಎಂದು ಬಸವರಾಜ್‌ ಅವರು ಅಕ್ಟೋಬರ್‌ 20ರಂದು ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ನಾಥೂರಾಮ್‌ ಗೋಡ್ಸೆ ಹಾಗೂ ಗಾಂಧಿ ಹತ್ಯೆಯ ಇತರ ಆರೋಪಿಗಳು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕರು. ಇಂತಹವರನ್ನು ಸಾವರ್ಕರ್‌ ಬೆಂಬಲಿಸಿದ್ದರು’ ಎಂದು ಕಿಡಿಕಾರಿದ್ದರು.

‘ಸೋಮವಾರ ಮಧ್ಯಾಹ್ನ 2.45ರ ಸುಮಾರಿಗೆ ಕರೆ ಮಾಡಿದ ವ್ಯಕ್ತಿ, ಭದ್ರಾವತಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಸಾವರ್ಕರ್‌ ಬಗ್ಗೆ ನಾನು ನೀಡಿದ ಹೇಳಿಕೆಗೆ ವಾರದೊಳಗೆ ಪತ್ರಿಕಾಗೋಷ್ಠಿ ಕರೆದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜೀವಕ್ಕೆ ಆಪತ್ತು ತಂದುಕೊಳ್ಳುತ್ತೀರಿ ಎಂದು ಬೆದರಿಕೆವೊಡ್ಡಿದ್ದಾನೆ. ಸಾವರ್ಕರ್‌ಗೆ ಭಾರತ ರತ್ನ ನೀಡಬೇಕು ಎಂಬ ಪ್ರಸ್ತಾವವನ್ನು ಆ ವೇಳೆ ದೇಶದಾದ್ಯಂತ ಕಾಂಗ್ರೆಸ್‌ ಖಂಡಿಸಿತ್ತು ಎಂದು ಸಮಾಜಾಯಿಷಿ ನೀಡಿದರೂ ಆತ ಸಮಾಧಾನಗೊಂಡಿಲ್ಲ. ಹೀಗಾಗಿ ನನಗೆ ಜೀವಬೆದರಿಕೆ ಹಾಕಿರುವ ಬಗ್ಗೆ ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ’ ಎಂದು ಡಿ. ಬಸವರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.