ADVERTISEMENT

ಕನಕಪುರ, ಮಾಗಡಿ: ಗರಿಗೆದರಲಿದೆ ರಾಜಕೀಯ

ಎರಡು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಿದ ಆಯೋಗ: ನ.12ರಂದು ಮತದಾನ

ಆರ್.ಜಿತೇಂದ್ರ
Published 21 ಅಕ್ಟೋಬರ್ 2019, 1:43 IST
Last Updated 21 ಅಕ್ಟೋಬರ್ 2019, 1:43 IST
   

ರಾಮನಗರ: ಕನಕಪುರ ನಗರಸಭೆ ಹಾಗೂ ಮಾಗಡಿ ಪುರಸಭೆಗೆ ಭಾನುವಾರ ಚುನಾವಣೆ ಘೋಷಣೆ ಆಗಿದ್ದು,
ನವೆಂಬರ್‌ 12ರಂದು ಮತದಾನ ನಡೆಯಲಿದೆ. ಆದರೆ ಡಿ.ಕೆ. ಶಿವಕುಮಾರ್‌ ಜೈಲಿನಲ್ಲಿರುವ ಕಾರಣ
ಕಾಂಗ್ರೆಸ್‌ನಲ್ಲಿ ಆತಂಕ ಕವಿದಿದೆ.

ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಡುವಂತೆ ರಾಜ್ಯ ಚುನಾವಣಾ ಆಯೋಗವು ಕಳೆದ ಸೆಪ್ಟೆಂಬರ್‌ನಲ್ಲಿ
ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲಿಯೇ ಭಾನುವಾರ ಆಯೋಗ ಚುನಾವಣಾ ವೇಳಾಪಟ್ಟಿ
ಯನ್ನು ಪ್ರಕಟಿಸಿದೆ. ಸೋಮವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಕನಕಪುರ ನಗರಸಭೆಯ ಆಡಳಿತಾವಧಿಯು ಅವಧಿಯು ಇದೇ ವರ್ಷ ಮಾರ್ಚ್‌ 16ರಂದು ಹಾಗೂ ಮಾಗಡಿ ಪುರಸಭೆಯ ಅವಧಿಯು ಮಾರ್ಚ್‌ 18ರಂದು ಕೊನೆಗೊಂಡಿತ್ತು. ಅವಧಿಮುಗಿದು ಏಳು ತಿಂಗಳ ಬಳಿಕ ಚುನಾವಣೆ ನಡೆಯಲಿದೆ.

ಆದರೆ ಡಿಕೆಶಿ ಸದ್ಯ ಜೈಲಿನಲ್ಲಿ ಇದ್ದಾರೆ. ಸಂಸದ ಡಿ.ಕೆ. ಸುರೇಶ್‌ ಸಹ ಕಳೆದೆರಡು ತಿಂಗಳಿನಿಂದ ದೆಹಲಿಯಲ್ಲಿದ್ದಾರೆ. ಹೀಗಾಗಿ ಸ್ಥಳೀಯ ಕಾರ್ಯಕರ್ತರಲ್ಲಿ ಚುನಾವಣಾ ಉತ್ಸಾಹ ಇಲ್ಲವಾಗಿ
ದೆ. ಡಿಕೆಶಿ ಇಲ್ಲದೇ ಮೊದಲ ಚುನಾವಣೆ ಎದುರಿಸಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ನಡೆಸಬೇಕಿದೆ. ಇಬ್ಬರು ನಾಯಕರ ಅನುಪಸ್ಥಿತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಕನಕಪುರ ಚುನಾವಣೆಯ ಸಾರಥ್ಯ ವಹಿಸುವ ಸಾಧ್ಯತೆ ಇದೆ. ಟಿಕೆಟ್‌ ಹಂಚಿಕೆಯನ್ನು ಎಚ್‌.ಸಿ. ಬಾಲಕೃಷ್ಣ ಹಾಗೂ ಎಚ್‌.ಎಂ. ರೇವಣ್ಣ ತೀರ್ಮಾನಿಸಲಿದ್ದಾರೆ.

ADVERTISEMENT

ಕನಕಪುರ ನಗರಸಭೆಯು 27 ವಾರ್ಡುಗಳನ್ನು ಹೊಂದಿದ್ದು ಕಳೆದ ಚುನಾವಣೆಯಲ್ಲಿ 22ರಲ್ಲಿ ಕಾಂಗ್ರೆಸ್‌ ಹಾಗೂ 5ರಲ್ಲಿ ಜೆಡಿಎಸ್‌ ಸದಸ್ಯರು ಆಯ್ಕೆಯಾಗಿದ್ದರು. ಈ ಬಾರಿ ಕ್ಷೇತ್ರಗಳ ಪುನರ್‌ವಿಂಗಡಣೆಆಗಿದ್ದು, ಒಟ್ಟು 31 ವಾರ್ಡುಗಳನ್ನು ರಚಿಸಲಾಗಿದೆ. ಹಿಂದೆ ಇಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಕಳೆದ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿ ಬಾವುಟ ಬೀಸಿದ್ದ ಇಲ್ಲಿನ ಜೆಡಿಎಸ್ ಈ ಬಾರಿ ಯಾವ ರೀತಿ ಸ್ಪರ್ಧೆ ಒಡ್ಡಲಿದೆ ಎಂದು ಕಾದು ನೋಡಬೇಕಿದೆ. ಬಿಜೆಪಿ ಎಲ್ಲ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಮಾಗಡಿ ಪುರಸಭೆಯು 23 ವಾರ್ಡ್‌ ಹೊಂದಿದ್ದು, ಈಗಾಗಲೇ ಇಲ್ಲಿ ಟಿಕೆಟ್‌ಗಾಗಿ ಪೈಪೋಟಿ ಆರಂಭಗೊಂಡಿ
ದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್ ಇಲ್ಲಿ ಸಮಬಲ ಹೊಂದಿವೆ. ಕಳೆದ ಬಾರಿ ಎರಡೂ ಪಕ್ಷಗಳ ಬೆಂಬಲಿತರು ಇಲ್ಲಿ ಅಧಿಕಾರ ಅನುಭವಿಸಿದ್ದಾರೆ.

ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಈ ಬಾರಿಯೂ ಚುನಾವಣೆ ಘೋಷಣೆ ಆಗಿಲ್ಲ. ಚನ್ನಪಟ್ಟಣ ನಗರಸಭೆ ಆಡಳಿತಾವಧಿಯು ಕಳೆದ ಮಾರ್ಚ್‌ 14ರಂದು ಹಾಗೂ ರಾಮನಗರ ನಗರಸಭೆ ಆಡಳಿತಾವಧಿಯು ಮಾರ್ಚ್‌ 16ಕ್ಕೆ ಕೊನೆಗೊಂಡಿದೆ.

ರಾಮನಗರ, ಚನ್ನಪಟ್ಟಣದಲ್ಲಿ ಅಧಿಕಾರಿಗಳ ದರ್ಬಾರ್‌

ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಈ ಬಾರಿಯೂ ಚುನಾವಣೆ ಘೋಷಣೆ ಆಗಿಲ್ಲ. ಹೀಗಾಗಿ ಅಧಿಕಾರಿಗಳ ದರ್ಬಾರ್‌ ಮುಂದುವರಿಯಲಿದೆ. ಚನ್ನಪಟ್ಟಣ ನಗರಸಭೆ ಆಡಳಿತಾವಧಿಯು ಕಳೆದ ಮಾರ್ಚ್‌ 14ರಂದು ಹಾಗೂ ರಾಮನಗರ ನಗರಸಭೆ ಆಡಳಿತಾವಧಿಯು ಮಾರ್ಚ್‌ 16ಕ್ಕೆ ಕೊನೆಗೊಂಡಿದೆ. ಏಳು ತಿಂಗಳ ಬಳಿಕವೂ ಇಲ್ಲಿ ಚುನಾವಣೆ ನಡೆಸಲು ಆಯೋಗವು ಮನಸ್ಸು ಮಾಡಿಲ್ಲ. ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಕಾರಣ ಚುನಾವಣೆಯು ಮುಂದೂಡಲ್ಪಟ್ಟಿದೆ. ನಗರಸಭೆಯಲ್ಲಿ ಅದೃಷ್ಟ ಪರೀಕ್ಷೆ ಮಾಡುವ ಉತ್ಸಾಹದಲ್ಲಿ ಇರುವ ಟಿಕೆಟ್ ಆಕಾಂಕ್ಷಿಗಳಿಗೆ ಇದರಿಂದ ಮತ್ತೊಮ್ಮೆ ನಿರಾಸೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.