ADVERTISEMENT

ದೆಹಲಿಯಿಂದ ಬೆಂಗಳೂರಿಗೆ ಬಂದ 920 ಕನ್ನಡಿಗರು: ಎಲ್ಲರ ಕ್ವಾರಂಟೈನ್‌ಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 2:59 IST
Last Updated 14 ಮೇ 2020, 2:59 IST
ದೆಹಲಿಯಿಂದ ಆಗಮಿಸಿದ ಪ್ರಯಾಣಿಕರನ್ನು ನಗರದ ವಿವಿಧ ಹೋಟೆಲ್‌‌ಗಳಿಗೆ ಕಳುಹಿಸಲಾಯಿತು –ಪ್ರಜಾವಾಣಿ ಚಿತ್ರ
ದೆಹಲಿಯಿಂದ ಆಗಮಿಸಿದ ಪ್ರಯಾಣಿಕರನ್ನು ನಗರದ ವಿವಿಧ ಹೋಟೆಲ್‌‌ಗಳಿಗೆ ಕಳುಹಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನವದೆಹಲಿಯಿಂದ ಮಂಗಳವಾರ ಹೊರಟ ವಿಶೇಷ ರೈಲು ಗುರುವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದು, ಇದರಲ್ಲಿರುವ 920 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ತಾಯ್ನಾಡಿಗೆ ಬಂದ ಕನ್ನಡಿಗರನ್ನು ಕಾಣಲು ಅವರ ಸಂಬಂಧಿಕರು ರೈಲು ನಿಲ್ದಾಣದ ಬಳಿ ಜಮಾಯಿಸಿದ್ದಾರೆ. 7.15ರ ಸುಮಾರಿಗೆ ರೈಲು ಬಂದಿದ್ದು, ಅದರಲ್ಲಿರುವ ಪ್ರಯಾಣಿಕರಿಗೆ ಅರ್ಜಿ ನಮೂನೆಗಳನ್ನು ನೀಡಿ ಭರ್ತಿ ಮಾಡಲು ತಿಳಿಸಲಾಗಿದೆ. ಏನೆಲ್ಲಾ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಬೇಕು ಎಂಬ ಮಾರ್ಗದರ್ಶನವನ್ನು ರೈಲ್ವೆ ಪೊಲೀಸರು ಮತ್ತು ಅಧಿಕಾರಿಗಳು ಮಾಡುತ್ತಿದ್ದಾರೆ.

ಈ ಪ್ರಕ್ರಿಯೆ ಮುಗಿದ ಬಳಿಕ ಆರೋಗ್ಯ ತಪಾಸಣೆ ನಡೆಸಿ ಎಲ್ಲರನ್ನೂ14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ಆರೋಗ್ಯ ತಪಾಸಣೆಗೆ ಬಿಬಿಎಂಪಿಯ 10 ತಂಡಗಳು ಸಜ್ಜಾಗಿವೆ.

ADVERTISEMENT

ನಗರದಲ್ಲಿ ವಿವಿಧ ದರ್ಜೆಯ 90 ಹೋಟೆಲ್‌ಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ಈಗಾಗಲೇ ಕಾಯ್ದಿರಿಸಿದ್ದಾರೆ. ಅವುಗಳಲ್ಲಿ 4,700 ಮಂದಿ ಕ್ವಾರಂಟೈನ್‌ನಲ್ಲಿ ಇರಲು ಅವಕಾಶ ಇದೆ. ಎಲ್ಲರನ್ನು ನೇರವಾಗಿ ಅಲ್ಲಿಗೆ ಕರೆದೊಯ್ಯಲು ಬಿಎಂಟಿಸಿ ಬಸ್‌ಗಳು ಸಜ್ಜಾಗಿ ನಿಂತಿವೆ.

ಕೊಠಡಿ ಬಾಡಿಗೆ ಮತ್ತು ಆಹಾರದ ವೆಚ್ಚವನ್ನು ಕ್ವಾರಂಟೈನ್‌ನಲ್ಲಿ ಇರುವವರೇ ಭರಿಸಬೇಕು. ಹೀಗಾಗಿ, ಯಾವ ದರ್ಜೆಯ ಹೋಟೆಲ್‌ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಬಡವರಿದ್ದರೆ ಅವರನ್ನು ಸರ್ಕಾರಿ ಹಾಸ್ಟೆಲ್, ಸಮುದಾಯಭವನಗಳಲ್ಲಿ ಇರಿಸಲಾಗುವುದು. ಅವರಿಗೆ ಊಟದ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ದೆಹಲಿಯಿಂದ ಬಂದವರನ್ನು ಭೇಟಿ ಮಾಡಲು ಸಂಬಂಧಿಕರು ಜಮಾಯಿಸಿದ್ದಾರೆ. ಆದರೆ, ಭೇಟಿಗೆ ಅಧಿಕಾರಿಗಳುಅವಕಾಶ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.