ADVERTISEMENT

ಐ.ಟಿ. ಅಧಿಕಾರಿಗಳಿಗೂ ‘ಕಾವೇರಿ’ ಲಾಗಿನ್‌

ಆದಾಯ ತೆರಿಗೆ ವಂಚನೆ ತಡೆಗೆ ಸ್ಥಿರಾಸ್ತಿ ನೋಂದಣಿ ಮೇಲೆ ನಿಗಾ ಇಡಲು ಅವಕಾಶ

ಸುಬ್ರಹ್ಮಣ್ಯ ವಿ.ಎಸ್‌.
Published 24 ಡಿಸೆಂಬರ್ 2024, 1:17 IST
Last Updated 24 ಡಿಸೆಂಬರ್ 2024, 1:17 IST
   

ಬೆಂಗಳೂರು: ಆದಾಯ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಸ್ಥಿರಾಸ್ತಿಗಳ ನೋಂದಣಿ, ಪರಭಾರೆ ವಹಿವಾಟುಗಳನ್ನು ನೇರವಾಗಿ ಪರಿಶೀಲಿಸಲು ಅವಕಾಶವಾಗುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ‘ಕಾವೇರಿ–2’ ತಂತ್ರಾಂಶದಲ್ಲಿ ಆದಾಯ ತೆರಿಗೆ (ಐ.ಟಿ.) ಅಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್‌ ಒದಗಿಸಲಿದೆ.

ತೆರಿಗೆ ವಂಚನೆಯ ಸಂಶಯ ವ್ಯಕ್ತವಾಗುವ ಪ್ರತಿ ಪ್ರಕರಣದ ದಾಖಲೆಗಳನ್ನು ಪ್ರತ್ಯೇಕವಾಗಿ ಐ.ಟಿ. ಅಧಿಕಾರಿಗಳಿಗೆ ಒದಗಿಸುವುದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಹೊರೆಯಾಗುತ್ತಿದೆ ಎಂಬ ಕಾರಣದಿಂದ ಪ್ರತ್ಯೇಕ ಲಾಗಿನ್‌ ರೂಪಿಸಲಾಗಿದೆ. ಐ.ಟಿ. ಅಧಿಕಾರಿಗಳಿಗೆ ಕಾವೇರಿ ತಂತ್ರಾಂಶದೊಳಕ್ಕೆ ಲಾಗಿನ್‌ ಆಗಲು ಅವಕಾಶ ನೀಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ನೀಡಿದೆ.

ಇದೇ ವರ್ಷದ ಜನವರಿಯಲ್ಲಿ ನಗರದ ಹೆಬ್ಬಾಳ, ಹಲಸೂರು ಮತ್ತು ಇಂದಿರಾನಗರ ಉಪ ನೋಂದಣಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಭಾರಿ ಮೊತ್ತದ ಸ್ಥಿರಾಸ್ತಿ ನೋಂದಣಿ, ಪರಭಾರೆಗೆ ಸಂಬಂಧಿಸಿದ ವಹಿವಾಟುಗಳಲ್ಲಿ ಖರೀದಿದಾರರ ಪಾನ್‌ ಸಂಖ್ಯೆ ಉಲ್ಲೇಖಿಸದೇ ಇರುವುದನ್ನು ಪತ್ತೆಹಚ್ಚಲಾಗಿತ್ತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ನೋಂದಣಿ ದಾಖಲೆಗಳಲ್ಲಿ ಪಾನ್‌ ಸಂಖ್ಯೆಯ ಉಲ್ಲೇಖವೇ ಇರಲಿಲ್ಲ, ಹಲವು ಪ್ರಕರಣಗಳಲ್ಲಿ ಪಾನ್‌ ಸಂಖ್ಯೆಯನ್ನೇ ತಪ್ಪಾಗಿ ಉಲ್ಲೇಖಿಸಿರುವುದು ಕಂಡುಬಂದಿತ್ತು.

ADVERTISEMENT

ಮೂರೂ ಉಪ ನೋಂದಣಿ ಕಚೇರಿಗಳಲ್ಲಿ ನಡೆದಿರುವ ಸುಮಾರು ₹3,000 ಕೋಟಿ ಮೌಲ್ಯದ ಆಸ್ತಿಗಳ ನೋಂದಣಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದ ಕಂದಾಯ ಇಲಾಖೆಯನ್ನು ಕೋರಿದ್ದರು. ಐ.ಟಿ ಅಧಿಕಾರಿಗಳು ಕೋರಿದಾಗಲೆಲ್ಲ ದಾಖಲೆ ಒದಗಿಸುವ ಬದಲಿಗೆ ನೇರವಾಗಿ ತಂತ್ರಾಂಶದಲ್ಲೇ ಒಳ ಪ್ರವೇಶಿಸಿ ನಿರಂತರ ಪರಿಶೀಲನೆಗೆ ಅವಕಾಶ ಕಲ್ಪಿಸಲು ಇಲಾಖೆ ತೀರ್ಮಾನ ಕೈಗೊಂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ಎ. ದಯಾನಂದ, ‘ಐ.ಟಿ. ಅಧಿಕಾರಿಗಳು ಕಾವೇರಿ ತಂತ್ರಾಂಶವನ್ನು ಬಳಸಿಕೊಂಡೇ ದಾಖಲೆಗಳನ್ನು ಪರಿಶೀಲಿಸಲು ಹಿಂದೆಯೇ ಅವಕಾಶ ಇತ್ತು. ಆದರೆ, ಅವರು ನಮ್ಮ ಕೇಂದ್ರ ಕಚೇರಿಗೆ ಬರಬೇಕಿತ್ತು. ಈಗ ಅವರು ಇರುವ ಸ್ಥಳದಿಂದಲೇ ನೇರವಾಗಿ ಲಾಗಿನ್‌ ಆಗಿ ದಾಖಲೆ ಪರಿಶೀಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರತ್ಯೇಕ ಲಾಗಿನ್‌ ಅನ್ನು ಈಗಾಗಲೇ ರೂಪಿಸಲಾಗಿದೆ. ಕೆಲವೇ ದಿನಗಳೊಳಗೆ ಐ.ಟಿ. ಅಧಿಕಾರಿಗಳ ಬಳಕೆಗೆ ಅದನ್ನು ಮುಕ್ತಗೊಳಿಸಲಾಗುವುದು. ಆ ಬಳಿಕ ಕಾವೇರಿ ತಂತ್ರಾಂಶದ ಮೂಲಕ ನಡೆಯುವ ಪ್ರತಿಯೊಂದು ನೋಂದಣಿ ವಹಿವಾಟನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ ಕ್ಷಣದಲ್ಲೇ ಪರಿಶೀಲಿಸಬಹುದು ಎಂದರು.

ಮಾಹಿತಿ ಒದಗಿಸುವ ಹೊರೆಯೂ ಇರದು: ತೆರಿಗೆ ವಂಚನೆ ಮತ್ತು ಕಪ್ಪು ಹಣದ ಚಲಾವಣೆ ತಡೆಯುವ ಉದ್ದೇಶದಿಂದ ಉಪ ನೋಂದಣಿ ಕಚೇರಿಗಳಲ್ಲಿ ನಡೆಯುವ ₹30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲ್ಲ ವಹಿವಾಟುಗಳ ಬಗ್ಗೆಯೂ ನೋಂದಣಿ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಆದರೆ, ಕೆಲವು ಅಧಿಕಾರಿಗಳು ನಿಯಮಿತವಾಗಿ ಮಾಹಿತಿ ಒದಗಿಸುತ್ತಿಲ್ಲ. ಈ ಕಾರಣದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುತ್ತಾರೆ.

ಐ.ಟಿ. ಅಧಿಕಾರಿಗಳಿಗೆ ‘ಕಾವೇರಿ’ ತಂತ್ರಾಂಶದಲ್ಲಿ ಲಾಗಿನ್‌ ನೀಡಿದರೆ ಹೆಚ್ಚಿನ ಮೊತ್ತದ ವಹಿವಾಟುಗಳ ಕುರಿತು ಮಾಹಿತಿ ಒದಗಿಸುವ ಹೊರೆ ನೋಂದಣಿ ಅಧಿಕಾರಿಗಳಿಗೆ ಇರುವುದಿಲ್ಲ ಎನ್ನುತ್ತವೆ ಇಲಾಖೆಯ ಮೂಲಗಳು.

ಶೀಘ್ರದಲ್ಲಿ ಡಿಜಿಟಲ್‌ ಚಲನ್‌

ಸ್ಥಿರಾಸ್ತಿಗಳ ನೋಂದಣಿ ವಹಿವಾಟಿನಲ್ಲಿ ಮುದ್ರಾಂಕ ಶುಲ್ಕ ವಂಚಿಸುವುದನ್ನು ತಪ್ಪಿಸಲು ‘ಡಿಜಿಟಲ್ ಚಲನ್‌’ಗಳ ಬಳಕೆಯನ್ನು ಆರಂಭಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದೆ. 2025ರ ಫೆಬ್ರುವರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

‘ಈಗ ಇರುವ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳು ಅಥವಾ ನೋಂದಾಯಿತ ಏಜೆನ್ಸಿಗಳಲ್ಲಿ ಇ–ಸ್ಟಾಂಪ್‌ (ಮುದ್ರಾಂಕ ಕಾಗದ) ಖರೀದಿಸಲು ಅವಕಾಶವಿದೆ. ಆಗ ಆಸ್ತಿಯ ಮೌಲ್ಯವನ್ನು ಕಡಿಮೆ ತೋರಿಸಿ, ಮುದ್ರಾಂಕ ಶುಲ್ಕ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಅವುಗಳನ್ನು ತಪ್ಪಿಸಲು ಡಿಜಿಟಲ್‌ ಚಲನ್‌ ಜಾರಿಗೊಳಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯ ವೆಬ್‌ಸೈಟ್‌ನಲ್ಲಿ ಸಂಬಂಧಿಸಿದ ಲಿಂಕ್‌ನಲ್ಲಿ ಪ್ರವೇಶಿಸಿ ಆಸ್ತಿಯ ಮೌಲ್ಯ ನಮೂದಿಸಿದರೆ ಸ್ವಯಂಚಾಲಿತವಾಗಿ ಮುದ್ರಾಂಕ ಕಾಗದ ಸಿದ್ಧವಾಗುತ್ತದೆ. ಶುಲ್ಕದ ಮೊತ್ತವನ್ನೂ ಸ್ವಯಂಚಾಲಿತವಾಗಿ ನಿರ್ಧರಿಸಲಾಗುತ್ತದೆ. ಆ ಮೂಲಕ ಮುದ್ರಾಂಕ ಶುಲ್ಕದ ವಂಚನೆಗೆ ಕಡಿವಾಣ ಬೀಳುತ್ತದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.