ADVERTISEMENT

ದೇವೇಗೌಡ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದ್ದರೇ?: CM ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 9:43 IST
Last Updated 22 ಏಪ್ರಿಲ್ 2024, 9:43 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಚಿಕ್ಕಮಗಳೂರು: ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದರು. ಅದಕ್ಕೂ ಮುಂಚಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಪ್ರಚಾರ ಮಾಡಲಾಗಿತ್ತೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ತರೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅವರು ಪ್ರಧಾನಿಯಾದಾಗ ನಾನೂ ಅವರ ಜೊತೆಯಲ್ಲೇ ಇದ್ದೆ. ಕಾಂಗ್ರೆಸ್ ಬೆಂಬಲದಿಂದ ಆಕಸ್ಮಿಕವಾಗಿ ಪ್ರಧಾನಿಯಾದರು. ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ. ಘೋಷಣೆ ಮಾಡಿದರೆ ತಲೆಬಾಗುವೆ ಎಂದು ಈಗ ರಾಜಕೀಯಕ್ಕೆ ಮಾತನಾಡುತ್ತಿದ್ದಾರೆ' ಎಂದರು.

ADVERTISEMENT

'ನಮ್ಮ ಮೈತ್ರಿಕೂಟದಲ್ಲಿ ಪ್ರಧಾನಿ ಆಗುವ ಅರ್ಹತೆ ಇರುವ ಸಾಕಷ್ಟು ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ' ಎಂದು ಪ್ರಶ್ನಿಸಿದರು.

'ಕಾಂಗ್ರೆಸ್ ವಿರುದ್ಧ ಚಿಪ್ಪಿನ ಜಾಹೀರಾತು ನೀಡಲಾಗುವುದು' ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ನಾವು ಚೊಂಬಿನ ಜಾಹೀರಾತು ನೀಡಿದ ಬಳಿಕ ಅವರಿಗೆ ಈ ಯೋಚನೆ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ. ಅದೆಲ್ಲವೂ ಚಿಪ್ಪಾ' ಎಂದು ಕೇಳಿದರು.

'ದೇಶ ಕಾಯಲು ಮೋದಿ, ಕಾವೇರಿ ಕಾಯಲು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಬೇಕು ಎಂದು ಪ್ರತಾಪ ಸಿಂಹ ಹೇಳಿದ್ದಾರೆ. ದೇಶ ಕಾಯುವುದು, ರಕ್ಷಣೆ ಮಾಡುವುದು ಪ್ರಧಾನಿ ಆದವರ ಕೆಲಸ.‌ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶದ ರಕ್ಷಣೆ ಮಾಡಿಲ್ಲವೇ, ಮೋದಿ ಒಬ್ಬರೇ ರಕ್ಷಣೆ ಮಾಡಿದ್ದಾರೆಯೇ. ಕಾವೇರಿ ವಿಷಯದಲ್ಲಿ ದೇವೇಗೌಡ, ಕುಮಾರಸ್ವಾಮಿ ಪಾತ್ರ ಏನು' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.