ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ನಿಂದ ವಾಪಸ್ ಪಡೆಯುವ ಸಂಬಂಧ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.
‘ರಾಜ್ಯದ 10 ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಿದ್ದು, ಈ ಕ್ಷೇತ್ರಗಳ ಅಭ್ಯರ್ಥಿ ಬದಲಾವಣೆ ಬೇಡ ಎನ್ನಲಾಗಿತ್ತು. ಆದರೆ ಅಂತಿಮವಾಗಿ ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಾಗ ಆತಂಕ ಅಸಮಾಧಾನ ಆಗಿತ್ತು. ಕಾಂಗ್ರೆಸ್ ಗೆಲ್ಲುವ ಪರಿಸ್ಥಿತಿ ಇದೆ. ಇದನ್ನು ವರಿಷ್ಠ ಗಮನಕ್ಕೆ ತಂದಿದ್ದೇನೆ’ ಎಂದರು.
ಜೊತೆಗೆ ಜೆಡಿಎಸ್ ದೇವೇಗೌಡರು, ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತೀರ್ಮಾನ ನೋಡಬೇಕು. ದೇವೇಗೌಡರೇ ನಿಂತರೆ ಅದಕ್ಕೆ ಸ್ವಾಗತಾರ್ಹ ಎಂದರು.
ಕ್ಷೇತ್ರ ಹಂಚಿಕೆಯಲ್ಲಿ ಪರಮೇಶ್ವರ ಅವರ ಪ್ರಶ್ನೆ ಬರಲ್ಲ. ಮೈತ್ರಿ ಮುಂದುವರೆಯಬೇಕು. ಹೊಂದಾಣಿಕೆಯಲ್ಲಿ ಪ್ರಾಮಾಣಿಕತೆ ತೋರಿದರೆ ಗೆಲ್ಲಲು ಸಾಧ್ಯ. ಸುಲಭವಾಗಿ ಗೆಲ್ಲುವ ಸೀಟುಗಳನ್ನು ಬುದ್ದಿವಂತಿಕೆಯಲ್ಲಿ ಹಂಚಿಕೊಳ್ಳಬೇಕು ಎಂದರು.
ರಾಹುಲ್ ಗಾಂಧಿ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ ಎಂದರು.
ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಹಿನ್ನಡೆ, ಭಷ್ಟಾಚಾರ, ಜಿಎಸ್ಟಿ, ನೋಟು ಅಮಾನ್ಯೀಕರಣದ ತೊಡಕು ಉಂಟು ಮಾಡಿದ್ದಾರೆ. ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಕ್ರೈಕ್ನನ್ನೇ ಚುನಾವಣೆಯ ಗಿಮಿಕ್ ಮಾಡಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಬರಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಈ ಬಾರಿ ಕರ್ನಾಟಕದಲ್ಲಿ ಮೈತ್ರಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದರು.
ಕಳಪೆ ಊಟ: ತಪ್ಪಿತಸ್ಥರ ವಿರುದ್ಧ ಕ್ರಮ
ನಗರದ ಇಂದಿರಾ ಕ್ಯಾಂಟೀನ್ನಲ್ಲಿ ಕಳಪೆ ಊಟ ಪೂರೈಸಲಾಗುತ್ತಿದೆ ಎಂಬ ಮಾಧ್ಯಮ ವರದಿ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
‘ನಾನು ಎರಡು ಮೂರು ಬಾರಿ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಿದ್ದೇನೆ. ರುಚಿ ಹಾಗೂ ಶುಚಿ ಕಾಪಾಡಿಕೊಳ್ಳಲು ಸೂಚಿಸಿದ್ದೆ. ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟದ ಕುರಿತು ಮಾಧ್ಯಮ ವರದಿ ಬಳಿಕ ಈ ಬಗ್ಗೆ ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ 198 ವಾರ್ಡ್ನ ಎಲ್ಲ ಕ್ಯಾಂಟೀನ್ಗಳಲ್ಲೂ ಆಹಾರದ ಗುಣಮಟ್ಟ ಪರೀಕ್ಷಿಸುವಂತೆಯೂ ನಿರ್ದೇಶನ ನೀಡಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.