ಮಡಿಕೇರಿ: ವಿಜಯದಶಮಿಯಂದು ನಡೆಯುವ ಶೋಭಾಯಾತ್ರೆಗೆ ‘ಮಂಜಿನ ನಗರಿ’ ಮಡಿಕೇರಿ ಸಜ್ಜಾಗಿದೆ. ಮಂಗಳವಾರ ರಾತ್ರಿ ಕಂಗೊಳಿಸುವ ವಿದ್ಯುತ್ ಬೆಳಕಿನಲ್ಲಿ ವೈಭವಯುತ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಸರ್ಕಾರಿ ಕಟ್ಟಡಗಳು, ಅಂಗಡಿಗಳು ಹಾಗೂ ಮುಖ್ಯರಸ್ತೆಗಳು ವಿದ್ಯುದ್ದೀಪಗಳ ಬೆಳಕಿನಲ್ಲಿ ಜಗಮಗಿಸುತ್ತಿವೆ.
ಮಂಗಳವಾರ ದಶಮಂಟಪಗಳು ಪೌರಾಣಿಕ ಕಥೆಯ ರೂಪಕಗಳನ್ನು ಪ್ರಸ್ತುತ ಪಡಿಸಲಿದ್ದು, ಅದಕ್ಕೆ ದೇವಸ್ಥಾನ ಸಮಿತಿಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ. ಕೋಟೆ ಗಣಪತಿ ದೇವಸ್ಥಾನ ಸಮಿತಿ, ಚೌಟಿ ಮಾರಿಯಮ್ಮ, ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀರಾಮ ಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕೋಟೆ ಮಾರಿಯಮ್ಮ, ಕೋದಂಡ ರಾಮಮಂದಿರ, ಕರವಲೆ ಭಗವತಿ, ಕಂಚಿ ಕಾಮಾಕ್ಷಿಯಮ್ಮ ಸಮಿತಿಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಪ್ರವಾಸಿಗರೂ ಕಾತರರಾಗಿದ್ದಾರೆ.
ಕೋದಂಡ ರಾಮ ದೇವಾಲಯವು 45ನೇ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದು ಈ ವರ್ಷ ‘ಶಿವನಿಂದ ತ್ರಿಪುರಾಸುರನ ಸಂಹಾರ’ ಕಥೆ ಆಯ್ದುಕೊಳ್ಳಲಾಗಿದೆ. ಪ್ರೇಕ್ಷಕರ ಅನುಕೂಲಕ್ಕೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.
ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಮಡಿಕೇರಿಯತ್ತ ಪ್ರವಾಸಿಗರೂ ಬರುತ್ತಿದ್ದು, ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳು ಭರ್ತಿಯಾಗುತ್ತಿವೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.