ADVERTISEMENT

ಮಕ್ಕಳ ಪುಸ್ತಕ ಪ್ರಾಧಿಕಾರ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:15 IST
Last Updated 5 ಜನವರಿ 2019, 20:15 IST
   

ಡಾ.ಡಿ.ಸಿ.ಪಾವಟೆ ವೇದಿಕೆ (ಧಾರವಾಡ): ಪ್ರಕಟಣೆ, ಪ್ರಚಾರ ಮತ್ತು ಪ್ರಸಾರದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಾಹಿತ್ಯಕ್ಕಾಗಿ ಪ್ರತ್ಯೇಕವಾಗಿ ‘ಮಕ್ಕಳ ಪುಸ್ತಕ ಪ್ರಾಧಿಕಾರ’ ರಚನೆಯಾಗಬೇಕು ಎಂದು ಮಕ್ಕಳ ಸಾಹಿತಿ ಡಾ.ರಾಜೇಂದ್ರ ಎಸ್. ಗಡಾದ ಆಗ್ರಹಿಸಿದರು.

‘ಮಕ್ಕಳ ಸಾಹಿತ್ಯ’ ಗೋಷ್ಠಿಯಲ್ಲಿ ‘ಮಕ್ಕಳ ಸಾಹಿತ್ಯ; ಪ್ರಕಟಣೆ ಮತ್ತು ಪ್ರಚಾರದ ಸಮಸ್ಯೆಗಳು’ ಕುರಿತು ಪ್ರಬಂಧ ಮಂಡಿಸಿದ ಅವರು, ‘ಕವಲು ದಾರಿಯಲ್ಲಿರುವ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಇತರ ಸಾಹಿತ್ಯ ಪ್ರಕಾರಕ್ಕೆ ದೊರೆಯುತ್ತಿರುವ ಮಾನ್ಯತೆ ದೊರೆಯುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಮಕ್ಕಳ ಪುಸ್ತಕ ನೀತಿ ಹಾಗೂ ಮಕ್ಕಳ ಪುಸ್ತಕ ಪ್ರಾಧಿಕಾರ ರಚಿಸಬೇಕಿದೆ’ ಎಂದರು.

‘ಜಾಗತಿಕ ಮಟ್ಟದ ಮಕ್ಕಳ ಸಾಹಿತ್ಯ ಮತ್ತು ಕನ್ನಡದ ಮಕ್ಕಳು’ ವಿಷಯವಾಗಿ ಮಾತನಾಡಿದ ಡಾ.ಆನಂದ ಪಾಟೀಲ, ‘ಕನ್ನಡದಂಥ ಪ್ರಾದೇಶಿಕ ಭಾಷಾ ವಲಯಗಳಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಇಂದಿನ ಮಕ್ಕಳು ಇಂಗ್ಲಿಷಿನಿಂದ ಕಳಚಿಕೊಳ್ಳಲಾರದ ಪರಿಸರದಲ್ಲಿದ್ದಾರೆ. ಪಾಶ್ಚಿಮಾತ್ಯದ ಓದು ನಮ್ಮ ಮಕ್ಕಳಲ್ಲಿ ವಿಭಿನ್ನ ನೆಲೆಯಲ್ಲಿ ನೋಡಲು ಸಿಗುತ್ತದೆ. ಮಕ್ಕಳಿಗೆ ವಿಸ್ತೃತ ಓದು ಇಂದಿನ ತೀರ ಅಗತ್ಯವೆನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಡಾ.ಬಸು ಬೇವಿನಗಿಡದ ‘ಮಕ್ಕಳ ಸಾಹಿತ್ಯ; ಮಾನವೀಯ ಮೌಲ್ಯಗಳು’ ವಿಷಯ ಕುರಿತು ಮಾತನಾಡಿದರು. ಡಾ.ಟಿ.ಎಸ್.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.