ಬೆಂಗಳೂರು: ಅಡಗೂರು ಎಚ್. ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ತೊರೆಯಲು ನಿರ್ಧರಿಸಿರುವ ಈ ಹೊತ್ತಿನಲ್ಲೇ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಅವರು ಪುಸ್ತಕವೊಂದರಲ್ಲಿ ದಾಖಲಿಸಿದ್ದ ಸಾಲುಗಳು ಸದ್ಯ ವೈರಲ್ ಆಗಿದೆ.
‘ಎಚ್ ವಿಶ್ವನಾಥ್ ಅವರು ಬರೆದಿರುವ ‘ಮಲ್ಲಿಗೆಯ ಮಾತು’ ಎಂಬ ಪುಸ್ತಕದಲ್ಲಿ ಕಂಡಿದ್ದು!’ ಎಂಬ ಶೀರ್ಷಿಕೆಯೊಂದಿಗೆ ಫೊಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅದರಲ್ಲಿ ಹೀಗೆ ಬರೆಯಲಾಗಿದೆ....
‘ಪಕ್ಷಾಂತರವೆಂಬ ಪಾತರಗಿತ್ತಿ’
‘ತಾವು ಹುಟ್ಟಿ ಬೆಳೆದ ಮನೆಯನ್ನು ದಿಕ್ಕರಿಸಿ, ಶತ್ರುಗಳ ಮನೆಗೆ ಆಶ್ರಯ ಬೇಡಿ ಹೋಗುವವರನ್ನು ಏನೆನ್ನಬೇಕು? ಪಕ್ಷಾಂತರಿಗಳು ಬೇಕಾದಷ್ಟು ಕಾರಣಗಳನ್ನು ತಮ್ಮ ಸಮರ್ಥನೆಗೆ ಕೊಡುತ್ತಾರೆ. ನಮ್ಮವರೇ ನನಗೆ ಮೋಸ ಮಾಡಿದರು. ಸ್ಥಾನ–ಮಾನ ಕೊಡಲಿಲ್ಲ. ನನ್ನ ಜಾತಿಯನ್ನು ಕಡೆಗಣಿಸಿದರು ಇತ್ಯಾದಿ. ಅವರು ಕೊಡುವ ಕಾರಣಗಳು ಎಷ್ಟು ಪೊಳ್ಳು ಅಂತ ಸ್ವತಃ ಅವರಿಗೇ ಗೊತ್ತಿರುತ್ತದೆ. ಅವರು ಹೊಸ ಹಲ್ಲುಗಾವಲಿನಲ್ಲಿ ಸಮೃದ್ಧವಾಗಿ ಮೇಯಲು ಹೊರಟಿರುತ್ತಾರೆ ಅಷ್ಟೇ,’ ಎಂದು ಪುಸ್ತಕದ ವಾಕ್ಯ ಖಂಡಿಕೆಯಲ್ಲಿ ಬರೆಯಲಾಗಿದೆ.
‘ಮಲ್ಲಿಗೆಯ ಮಾತು’ ಪುಸ್ತಕದ ಈ ಸಾಲುಗಳನ್ನು ಚಿತ್ರ ತೆಗೆದು ಸಾಮಾಜಿಕ ತಾಣಗಳಲ್ಲಿ ಸದ್ಯ ವೈರಲ್ ಮಾಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.